Friday, January 4, 2019



 ಏನು ಯೋಚಿಸ್ತಿದ್ದೀರಾ...?
ಏನು ಯೋಚನೆ ಮಾಡ್ತಿದ್ದೀವಿ? ಇದನ್ನ ತಿಳ್ಕೊಳ್ಳೋದು ತುಂಬಾ ಮುಖ್ಯ. ಯಾಕೆ ಅಂತ ತಿಳ್ಕೊಬೇಕಾದರೇ ಈ ಲೇಕನಿ ಓದಿ

ನಾನು ಒಂಬತ್ತನೆ ತರಗತಿಯಲ್ಲಿದ್ದಾಗ ವಿಜ್ಞಾನ ಪರೀಕ್ಷೆಗೆ ತಯಾರಾಗುತ್ತಿದ್ದಾಗ ನನಗೊಂದು ಆಲೋಚನೆ ಬಂತು, ಆ ಆಲೋಚನೆ ಏನೆಂದರೇ, ಅದಾಗಲೇ ಕತ್ತಾಲಾಗಿದೆ ಬೆಳಗ್ಗೆ ಪರೀಕ್ಷೆ ಇದೆ, ಈ ಅಲ್ಪ ಸಮಯದಲ್ಲಿ ನಾನು ಎಲ್ಲ ಓದಿ ಮುಗಿಸಲು ಸಾಧ್ಯವಿದೆಯೇ? ಎಂದು.

ಈ ಯೋಚನೆ ಬಂದಿದ್ದೇ ಬಂದಿದ್ದು, ನನಗೆ ಎದೆ ಹೊಡೆದುಕೊಳ್ಳಲು ಶುರುವಾಯಿತು, ಮುಖ ಬೆವರಲು ಹತ್ತಿತು, ಪುಸ್ತಕ ಕೈಯಿಂದ ಬೀಳುವಷ್ಟರ ಮಟ್ಟಿಗೆ ಕೈ ನಡುಗಲಾರಂಭಿಸಿತು, ಬಾಯಿ ಪದಗಳನ್ನು ಓದುತ್ತಿದೆ ಆದರೆ ತಲೆಗೆ ಏನು ಅರ್ಥವಾಗುತ್ತಿರಲಿಲ್ಲ. ಕಡೆಗೇ ಕಣ್ಣಿಂದ ಹನಿಗಳು ಜಾರಿ ಅಮ್ಮನ ಬಳಿ ಹೋಗಿ, ಅಮ್ಮ ನನಗೇನೋ ಆಗೋಗಿದೆ, ನಾಳೆ ಪರೀಕ್ಷೆ ಬರಿಯಲು ಸಾಧ್ಯವಿಲ್ಲ ಎಂದು ಬಿಟ್ಟೆ.

ಹಾಗೋ ಹೀಗೋ ಅಮ್ಮ ಒತ್ತಾಯ ಮಾಡಿ ನನ್ನನ್ನು ಪರೀಕ್ಷೆಗೆ ಕಳುಹಿಸಿದರು, ನಂತರ ನನಗೆ ಒಳ್ಳೆ ಅಂಕಗಳು ಬಂದವು. ಆದರೆ ಇದಾದ ಮೇಲೆ ಮತ್ತೊಂದು ಆಲೋಚನೆ ಬಂದಿತು ಅದೇನೆಂದರೆ, ಒಂದುವೇಳೆ ಮುಂದಿನ ಪರೀಕ್ಷೆಯಲ್ಲು ನನಗೇ ಹೀಗೆ ಭಯ ಆದರೆ ಏನು ಮಾಡುವುದು ಎಂದು. ಅಷ್ಟೇ ನನಗೆ ವಿಜ್ಞಾನವೆಂದರೇ ಒಂದು ತೆರನಾದ ಹಿಂಸೆ ಬಂದು ಬಿಟ್ಟಿತು. ಓದಲು ಕುಳಿತರೇ ಸಾಕು ಎದೆ ಹೊಡೆದುಕೊಳ್ಳುತಿತ್ತು.

ನಾನು ಪ್ರತಿ ಭಾರಿಯು ಯಾಕಾದರು ಶಾಲೆಗಳನ್ನಿಟ್ಟಿದ್ದಾರೋ, ಯಾಕಾದರು ಈ ಪರೀಕ್ಷೆಗಳು ಬರುತ್ತವೋ ಇವೆಲ್ಲಾ ಇರದಿದ್ದರೇ ನಾನು ಈ ಭಯ, ಹಿಂಸೆ ಇವುಗಳನೆಲ್ಲಾ ಅನುಭವಿಸುತ್ತಲೇ ಇರಲಿಲ್ಲ ಎಂದು ಸಾವಿರ ಭಾರಿ ಅಂದುಕೊಂಡಿದ್ದೇನೆ. ಎಲ್ಲರೂ ಹೇಳಿದಂತೆ ನಾನು ಅವತ್ತಿನದನ್ನು ಅವತ್ತೇ ಅಭ್ಯಾಸಿಸುತಿದ್ದೆ. ಪರೀಕ್ಷೆಗೆ ಒಂದು ತಿಂಗಳು ಮುಂಚೆಯೇ ಎಲ್ಲಾ ಓದಿ ಮುಗಿಸಿರುತ್ತದೆ, ಆದರು ಈ ತಳಮಳ ಕಡಿಮೆಯೇ ಆಗುತ್ತಿರಲಿಲ್ಲ.

ಹಾಗಾದರೇ ನನ್ನ ಒದ್ದಾಟಕ್ಕೆಲ್ಲಾ ಏನು ಕಾರಣ? ವಿಜ್ಞಾನ ವಿಷಯನಾ? ಶಾಲೆ ಪರೀಕ್ಷೆಗಳ? ಸೂಕ್ಷ್ಮವಾಗಿ ಗಮನಿಸಿದರೇ ಮೊದಲು ನನಗೆ ಆತಂಕ ಶುರುವಾಗಿದ್ದೂ, ‘ಬೆಳಗ್ಗೆ ಆಗುವುದರೊಳಗೆ ಎಲ್ಲವನ್ನು ಓದಿ ಮುಗಿಸಲು ಸಾಧ್ಯವೇ?’  ಎಂಬ ಒಂದೇ ಒಂದು ಆಲೋಚನೆಯಿಂದ, ಇದರಿಂದ ‘ಭಯ’ ಎಂಬ ಭಾವನೆ ಮೂಡಿತು, ಆ ಭಯದ ಕಾರಣ ನಾನು ಪರೀಕ್ಷೆಗೆ ಹೋಗಲ್ಲ ಎಂದು ಅಳಲಾರಂಭಿಸಿದೆ. ಹಾಗೆ ಮುಂದೇ ‘ಈ ಪರೀಕ್ಷೆಯಲ್ಲಿ ಆದಂತೆ ಮತ್ತೆಲ್ಲಾ ಪರೀಕ್ಷೆಯಲ್ಲಿ ಆದರೇ ಏನು ಗತಿ’ ಎಂಬ ಒಂದು ಆಲೋಚನೆ ನನ್ನಲ್ಲಿ ಪರೀಕ್ಷೆ ಬಗೆಗೆ ವಿಪರೀತ ಆತಂಕ ಮೂಡಿಸಿತು.

ಈ ಘಟನೆಯನ್ನು ನಾನು ಪ್ರಸ್ತಾಪಿಸುವುದಕ್ಕೆ ಒಂದು ಕಾರಣವಿದೆ. ನಾವು ಪ್ರತಿಭಾರಿಯು ನಮ್ಮ ನಡವಳಿಕೆಗಳಿಗೆ, ನಮ್ಮ ಕಷ್ಟ ಸುಖಗಳಿಗೆ ಬೇರೆಯವರಿಗೆ, ಹೊರ ಜಗತ್ತಿನ ಕಡೆಗೆ ಬೆಟ್ಟುಮಾಡೋದು ಸರ್ವೇಸಾಮಾನ್ಯ. ಆದರೆ ಸ್ವಲ್ಪ ಸೂಕ್ಷ್ಮವಾಗಿ ಗಮನಿಸಿದರೇ ನಮ್ಮ ಪ್ರತಿಯೊಂದು ಕಾರ್ಯಗಳ ಹಿಂದೆ ಒಂದಲ್ಲಾ ಒಂದು ಭಾವನೆಯ ಪ್ರೇರೆಪಣೆ ಇರುತ್ತದೆ. ಆ ಭಾವನೆ ಉಗಮದ ಹಿಂದೆ ಒಂದು ಆಲೋಚನೆ ಇರುತ್ತದೆ.
(thoughts) →→      (emotions) →→    (Actions)

ನಮ್ಮ ನಿಯಂತ್ರಣದಲ್ಲಿರದ ಈ ಆಲೋಚನೆಗಳಿಗೆ ನಾವು ಸ್ಪಂದಿಸುವ ರೀತಿಯಲ್ಲೇ ನಮ್ಮ ಖುಷಿ ನೆಮ್ಮದಿ ಅಡಗಿದೆ. ನನಗೆ ಬಾಧಿಸುತ್ತಿದ್ದ ಆಲೋಚನೆ ಬಗ್ಗೆ ಅರಿವಿಲ್ಲದ ನಾನು ಸಮಸ್ಯೆ ಇರುವುದು ಪರೀಕ್ಷೆಯಲ್ಲಿ, ವಿಜ್ಞಾನದಲ್ಲಿ ಎಂದು ಅವನ್ನು ಶಪಿಸಲಾರಂಭಿಸಿದೆ. ಮೇಲಿನ ಉದಾಹರಣೆಯಲ್ಲಿ ನನ್ನ ಆಲೋಚನೆಗೆ ಯಾವ ಹುರುಳಿರಲಿಲ್ಲ, ಆ ಆಲೋಚನೆಯನ್ನು ನಂಬಿ, ಆತ್ಮವಿಶ್ವಾಸ ಕಳೆದುಕೊಂಡೆ. ಹೀಗೆ ನನಗೆ ಓದುವುದೇ ಹಿಂಸೆ ಆಯಿತು. ಮುಂದೇ ಇದರ ಅರಿವಾದಾಗ ನನಗೆ ನಗು ಬಂದಿತು, ಇಷ್ಟೆನಾ ನನ್ನನ್ನು ಬಾಧಿಸುತ್ತಿರುವುದು ಎಂದು ತಿಳಿದ ನಂತರ ಇದು ಆಲೋಚನೆಯಷ್ಟೆ ಇದನ್ನು ನಂಬೋದು ಬೇಡ ನನ್ನನ್ನು ನಾನು ನಂಬುತ್ತೇನೆ ಎಂದು ಯೋಚಿಸ ತೊಡಗಿದೆ. ನಂತರ ಕ್ರಮೇಣ ನನ್ನ ಭಯ ಕಡಿಮೆಯಾಗಿ ನನಗೀಗ ಯಾವ ಪರೀಕ್ಷೆ ಭಯವು ಇಲ್ಲ.

ನಾವು ಭಾವಜೀವಿಗಳು, ಆದರೆ ಎಲ್ಲೋ ಒಂದು ಕಡೆ ಭಾವನೆಗಳು ಅತ್ಯಂತ ನಿರ್ಲಕ್ಷಕ್ಕೊಳಗಾಗಿರೋದು ದುರಂತ. ಆದರೆ ಸತ್ಯ ಏನೆಂದರೇ ಭಾವನೆಗಳಿಲ್ಲದೇ ನಾವೇನು ಮಾಡಲು ಸಾಧ್ಯವಿಲ್ಲ. ಈಗ ಈ ಲೇಖನಿ ಬರೆಯುವುದಕ್ಕೆ ನನಗೇ ನನ್ನ ವಿಷಯದ ಮೇಲೆ ನಂಬಿಕೆ ಇರಬೇಕು, ಆ ನಂಬಿಕೆ ಕೂಡ ಒಂದು ಭಾವನೆ. ಈ ಆಲೋಚನೆಗಳಾಗಲೀ, ಅದರಿಂದ ಉಗಮಿಸುವ ಭಾವನೆಗಳಾಗಲೀ ನಮ್ಮ ನಿಯಂತ್ರಣದಲ್ಲಿರುವುದಿಲ್ಲ. ಆದರೆ ನಮ್ಮಲ್ಲಿ ಮೂಡುತ್ತಿರುವ ಆಲೋಚನೆಗಳ ಬಗೆಗೆ ನವiಗೆ ಪ್ರಜ್ಞಾಪೂರ್ವಕ ಅರಿವಿದ್ದರೇ, ಅದರಿಂದ ಮೂಡುತ್ತಿರುವ ಭಾವನೆಗಳ ಬಗ್ಗೆ ಗಮನವಿದ್ದರೇ, ಆ ಆಲೋಚನೆಗಳಿಗೆ ಯಾವ ರೀತಿ ಸ್ಪಂದಿಸಬಹುದು ಎಂದು ನಾವೆ ನಿರ್ಧರಿಸಬಹುದು. ನಾನು ಮೇಲೆ ನನ್ನ ಸಮಸ್ಯೆ ಬಗೆಹರಿಸಿಕೊಂಡಂತೆ ಎಲ್ಲರೂ ತಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದು. ಅದಕ್ಕೆ ನಾವು ನಮಗೆ ಸಮಯ ಕೊಡಬೇಕು ಅಷ್ಟೇ.

ನಮ್ಮಲ್ಲಿ ಎಷ್ಟು ಭಾವನೆಗಳಿವೆ ಎಂಬುದರ ಬಗ್ಗೆ ನಿವiಗೆ ತಿಳಿದಿದೆಯೇ? ಕೆಳಗಿನ ಈ ಚಿತ್ರ ನೋಡಿ. ನಿಮ್ಮಲ್ಲಿ  ಈಗ ಯಾವ ಭಾವನೆ ಇದೆ ಗುರುತಿಸಿ.




ಈ ನನ್ನ ಆಲೋಚನೆ ಬ್ಲಾಗ್‍ನಲ್ಲಿ ಇನ್ನುಮುಂದೆ, ಜನ ಹೆಚ್ಚು ಪ್ರಯಾಣಿಸದ ಈ ದಾರಿಯ ಬಗ್ಗೆ ಹೆಚ್ಚು ಬರೆಯುತ್ತೇನೆ. ಈ ಭಾವನೆಗಳ ಮ್ಯಾಜಿಕ್ ಬಗ್ಗೆ ಮುಂದಿನ ವಾರಗಳಲ್ಲಿ ಮತ್ತಷ್ಟು ಹಂಚಿಕೊಳ್ಳುತ್ತೇನೆ.

ಅಂದ್ಹಾಗೆ ನಿಮಗೀಗ ಯಾವ ಆಲೋಚನೆಕಾಡುತ್ತಿದೆ? ಏನು ಯೋಚನೆ ಮಾಡುತ್ತಿದ್ದೀರಾ?




No comments:

Post a Comment