Are we understanding our children needs?

Are we more concerned about what others speak on our children than what our Children really wants?
Is suicide a timid decision?
How difficult the life would have been for someone to choose death as the option..?
Have we ever thought on these questions..?
Read and think..
ಹನಿ ಹನಿಯಾಗಿ ತೊನೆದು ತೂಗಿದ ಪ್ರೀತಿ
ಹರಿದು ಚೂರಾಯಿತೆ ಎದೆಯ ಒಲವಿನಾ ಬೀಡು
ರೆಕ್ಕೆ ಬಡಿದೊತ್ತಿಎತ್ತಿಕೊಳ್ಳುವ ಹಕ್ಕಿ
ಹಾಡಿನ ಜಾಡು ಹಿಡಿಯುತ್ತ ನನ್ನ ಪಾಡು..
ತಪ್ಪಿ ಹೋಯಿತಲ್ಲೆ ಚುಕ್ಕಿ ಬೆಳಕಿನ ಜಾಡು
ಇನ್ನಿಲ್ಲವಾಯಿತೆ ಆ ಹಕ್ಕಿ ಹಾಡು...
ಈ ಹಾಡಿನ ಸಾಲುಗಳ ಅರ್ಥವನ್ನರಿಯದ ನಾನು ನನ್ನ ಮುದ್ದು ಕಂದಮ್ಮನನ್ನು ತೊಟ್ಟಿಲಿಗೆ ಹಾಕಿ ಮಲಗಿಸುತಿದ್ದದ್ದೇ ಈ ಹಾಡಿನ ಸಾಲುಗಳನ್ನು ಹಾಡಿ..ಈ ಹಾಡನ್ನು ಕೇಳಿ ಬೆಳೆದ ನನ್ನ ಮಗಳು, ನನ್ನ ಗೂಡಿಂದ ಮರೆಯಾದಗಲೇ ಈ ಸಾಲುಗಳ ಅರ್ಥ ನನಗಾಗಿದ್ದು. ಈ ತಾಯಿಯ ಆರ್ಥನಾದ ಕೇಳಿ
ನಮ್ಮದು ವಿದ್ಯಾವಂತರ ಕುಟುಂಬ, ಅಮ್ಮ ಅಪ್ಪ ಅಕ್ಕ ಅಣ್ಣ ಎಲ್ಲರೂ ವಿದ್ಯಾವಂತರೂ ಹಾಗೆ ಒಳ್ಳೊಳ್ಳೆ ಹುದ್ದೆಗಳಲ್ಲಿದ್ದರು. ನಾನು ವಿದ್ಯಾವಂತಳೇ ಅತಿ ಚಿಕ್ಕ ವಯಸ್ಸಿಗೆ ನನಗೆ ನನ್ನ ಕೌಶಲ್ಯತೆಗೆ ಒಳ್ಳೆ ಕೆಲಸ, ಹಣ ಕೀರ್ತಿ ಎಲ್ಲವೂ ನನ್ನರಿಸಿ ಬಂದವು. ನಂತರಾ ಒಳ್ಳೇ ಕಡೇ ಮದುವೆಯು ಆಯಿತು. ನನ್ನನ್ನು ನನ್ನ ಗಂಡ ಚೆನ್ನಾಗಿ ಅರ್ಥ ಮಾಡಿಕೊಂಡಿದ್ದರು. ಇಬ್ಬರು ಚೆನ್ನಾಗಿ ದುಡಿತಿದ್ದೆವು. ನೆಮ್ಮದಿ ನಮ್ಮ ಮನೆಯಲ್ಲಿ ತುಂಬು ತುಳುಕುತಿತ್ತು. ಎಲ್ಲವೂ ಸರಿಯಿರುವುದಕ್ಕೆ ಎಲ್ಲಿ ಸಾಧ್ಯ? ನಾನು ನಮ್ಮ ಎಜಮಾನರು ಇಬ್ಬರು ಮಕ್ಕಳಿಗಾಗಿ ಬಹಳ ಹಪಹಪಿಸುತಿದ್ದವು, ಆದರೆ 4 ವರ್ಷಗಳಾದರು ಮಕ್ಕಳಾಗಲಿಲ್ಲ, ಇಬ್ಬರಿಗು ದೈಹಿಕವಾಗಿ ಯಾವುದೇ ಸಮಸ್ಯೆಯಿರಲಿಲ್ಲ, ವೈದ್ಯರುಗಳ ಬಳಿ ಸುತ್ತಾಡಿದೆವು, ಕಂಡ ಕಂಡ ದೇವರುಗಳಿಗೆಲ್ಲ ಕೈ ಮುಗಿದೆವು. ಒಬ್ಬರು ಮಾತ್ರ ನಿಮ್ಮ ಒತ್ತಡ ಕಡಿಮೆ ಮಾಡಿಕೊಳ್ಳಿ ಸಂತಸವಾಗಿರಿ ಮಕ್ಕಳು ಖಂಡಿತ ಆಗುತ್ತದೆ ಎಂದರು.
ಆ ಒಂದು ಭರವಸೆಯ ಮಾತು ಸಾಕಿತ್ತು ನನಗೆ, ನಾನು ನನಗೆ ಮಕ್ಕಳಾಗುತ್ತೆ ಎಂದು ನಂಬತೊಡಗಿದೆ. ಸುಮ್ಮನೆ ಮಾನಸಿಕ ಒತ್ತಡ ಹಾಕಿಕೊಳ್ಳುವುದಕ್ಕಿಂತ ಆಶಾವಾದಿಯಾಗಿ ಇರುವುದು ಒಳ್ಳೆಯದು, ನಮಗೇನು ದೊರಕ ಬೇಕೋ ಅದು ಖಂಡಿತ ದೊರೆಯುತ್ತದೆ ಎಂದುಕೊಂಡೆ. ಅಂತೆಯೇ ನನ್ನ ಜೀವನಶೈಲಿಯಲ್ಲಿ ಒಂದಷ್ಟು ಲವಲವಿಕೆಯ ಬದಲಾವಣೆ ತಂದುಕೊಂಡೆ, ಮಾನಸಿಕ, ಶಾರೀರಿಕ ಆರೋಗ್ಯದ ಕಡೆ ಹೆಚ್ಚು ಗಮನ ಕೊಟ್ಟೆ , ಕೊರಗುವುದನ್ನು ಕಡಿಮೆ ಮಾಡಿದೆ, ಕೆಲವೇ ತಿಂಗಳಲ್ಲಿ ನಾನು ಹಪಹಪಿಸುತಿದ್ದದ್ದು ನನಗೆ ಲಭಿಸಿತು, ನಾನು ಗರ್ಭಿಣಿಯಾಗಿದ್ದೆ. ನನಗೂ ನಮ್ಮ ಮನೆಯವರಿಗು ಆನಂದಕ್ಕೆ ಪಾರವೇ ಇರಲಿಲ್ಲ, ಮರುಭೂಮಿಯಲ್ಲಿ ವರ್ಷಧಾರೆಯಾದಂತಹ ಅನುಭವ, ಸ್ವರ್ಗಕ್ಕೆ ಮೂರೇ ಗೇಣು ಎಂಬಷ್ಟು ಸಂತೋಷ, ಜೀವನದಲ್ಲಿ ಎಲ್ಲವು ದೊರೆತ ಭಾಗ್ಯಶಾಲಿಗಳು ಎಂದು ಕೃತಜ್ಞಳಾಗಿದ್ದೆ. ಆದರೆ ಅದು ಹೆಚ್ಚು ದಿನ ಉಳಿಯಲಿಲ್ಲ.
ನಾನು ಮುದ್ದಾದ ಹೆಣ್ಣುಮಗುವಿಗೆ ಜನುಮ ನೀಡಿದೆ, ನಾನು, ನನ್ನ ಗಂಡ, ಮಗಳು ಎಂದು ಜೀವನ ನೆಮ್ಮದಿಯಾಗಿ ಸಾಗಿತ್ತು. ಅವಳಿಗೆ ಯಾವುದಕ್ಕು ಕೊರತೆ ಹಾಗದಾಗೆ ಬೆಳೆಸಿದೆವು. ನನ್ನ ಮಗಳು ಎಲ್ಲಾದರಲ್ಲು ಮುಂದಿದ್ದಳು. ಅವಳನ್ನು ಓದಿಗೆ ಸೀಮಿತ ಮಾಡದೆ ಸಂಗೀತ, ನೃತ್ಯ ತರಗತಿಗಳಿಗು ಕಳುಹಿಸಿದೆವು. ಅವಳು ಅವೆಲ್ಲವನ್ನು ಅಷ್ಟೇ ಅಚ್ಚುಕಟ್ಟಾಗಿ ಆಸಕ್ತಿಯಿಂದ ಕಲೆತಳು, ಎಲ್ಲಾವಿಷಯದಲ್ಲೂ ಕುತೂಹಲ, ಎಲ್ಲಾದರಲ್ಲೂ ಗೆಲುವು. ಅವಳದ್ದು ಬಹುಮಾನಗಳ ಹಿಂಡೇ ಇದೆ. ನನ್ನ ಮಗಳನ್ನು ಕಂಡರೇ ನಮಗೇ ಬಹಳ ಹೆಮ್ಮೆ ಹಾಗೆ ಅವಳ ಗುಣ, ಲವಲವಿಕೆ, ಚುರುಕನ್ನು ಕಂಡು ಎಷ್ಟೋ ಜನ ಅವಳನ್ನು ನಾವು ಸಾಕಿಕೊಳ್ಳುತ್ತೇವೆ ದತ್ತು ಕೊಡುವಿರಾ ಎಂದದ್ದು ಇದೆ. ನಮ್ಮ ಮಗಳೇ ನಮ್ಮ ಜೀವನದ ಉದ್ದೇಶ, ನಮ್ಮ ಮಗಳೇ ನಮ್ಮ ಕಣ್ಣಾಗಿದ್ದಳು.
ನನ್ನ ಮಗಳು ಶಾಲೆ ಮೆಟ್ಟಿಲೇರಿದ ನಂತರ ನಾನು ಮತ್ತೆ ಕೆಲಸಕ್ಕೆ ಹೋಗಲು ಶುರುಮಾಡಿದೆ. ಸಂಜೆ ಮನೆಗೆ ಬಂದಾಗ ನನ್ನ ಮಗಳು ಕಾಫಿ ಬೆರೆಸಿ ನನಗೆ ಕೊಟ್ಟು ಶಾಲೆಯಲ್ಲಿ ನಡೆದ ಘಟನಾವಳಿಗಳನ್ನ ವಿವರಿಸುತ್ತಿದ್ದಳು. ನನ್ನ ಆಫೀಸಿನಲ್ಲಿ ದಿನ ಹೇಗಿತ್ತು ಎಂದು ವಿಚಾರಿಸುತ್ತಿದ್ದಳು. ಅಷ್ಟು ಜಾಣೆ ನನ್ನ ಮಗಳು. ನನಗೆ ತಾಯಿ ಆಗಿದ್ದಳು. ನನ್ನ ನೋವುಗಳನ್ನು ಆಲಿಸಿ, ನನ್ನ ಕಣ್ಣೀರು ಒರೆಸಿ, ಯಾವುದಕ್ಕು ಚಿಂತಿಸಬೇಡ ಅಮ್ಮ ನಾನಿರುವೆ ಎನ್ನುತ್ತಿದ್ದಳು, ಆ ನನ್ನ ದೇವತೆ. ನಾನು ನಮ್ಮವರು ಏನಾದರು ಕಿತ್ತಾಡಿಕೊಂಡರೇ, ಯಾರ ಪರನು ವಹಿಸದೆ ಜಾಣ್ಮೆಯಿಂದ ನಗಿಸುಬಿಡುತ್ತಿದ್ದಳು, ಚತುರೆ ನನ್ನ ಮಗಳು.
ನನ್ನ ಮಗಳ ಆಟ ಪಾಠ ಬೆಳವಣಿಗೆಗಳ ನಡುವೆ ಸಮಯ ಹೋಗಿದ್ದೆ ಗೊತ್ತಾಗ್ಲಿಲ್ಲ, ಅವಳು ಬೆಳೆದದ್ದೆ ಗೊತ್ತಾಗ್ಲಿಲ್ಲ, ಹತ್ತನೆ ತರಗತಿಯಲ್ಲಿ ಶಾಲೆಗೆ ಮೊದಲು ಬಂದು, ತನಗಿಷ್ಟ ಬಂದ ಕಾಲೇಜಿನಲ್ಲಿ, ತನಗಿಷ್ಟ ಬಂದ ವಿಷಯವನ್ನ ಆಯ್ದು ಓದುತ್ತಿದ್ದಳು, ಹೀಗೆ ಮೊದಲನೇ ಪಿಯುಸಿ ಪರೀಕ್ಷೆಗಳು ಮುಗಿದು , ಸೆಕೆಂಡ್ ಪಿಯುಸಿ ವಿಶೇಷ ತರಗತಿಗಳಿಗೆಂದು ಕಾಲೇಜಿಗೆ ಹೋಗಿದ್ದಳು. ನಾನು ಎಂದಿನಂತೆ ಆಫೀಸಿಗೆ ಹೋದೆ. ಅಂದು ಮನಸ್ಸಲ್ಲಿ ಹೇಳಲಾಗದ ಸಂಕಟ, ಏನೋ ಹಿಂಸೆ, ಕರುಳೆಲ್ಲ ಒಂದು ತರಹ ನೋವು ಯಾಕೋ ಒಂದು ರೀತಿ ವಾಂತಿ ಬಂದಹಾಗೆ ಏನೋ ಹಿಂಸೆ, ನಾನು ನನಗೆ ಗ್ಯಾಸ್ಟ್ರಿಕ್ ಹೆಚ್ಚಾಯಿತೆಂದು ಲೀವ್ ಹಾಕಿ ಮನೆಗೆ ಮರಳಿದೆ.
ಅಲ್ಲೀ, ಬಾಗಿಲು ತೆರೆದರೇ, ನನ್ನಕಣ್ಣೇ ನಾ ನಂಬದಾದೆ, ಕಣ್ಣಿಗೆ ಕತ್ತಲು ಆವರಿಸಿ ಕೆಳಗೆ ಬಿದ್ದೆ. ಎಚ್ಚರವಾದಾಗ ನನ್ನವರು ನನ್ನಕೈ ಹಿಡಿದು ಬಿಕ್ಕಿಸುತ್ತಿದ್ದರು. ನನಗಾಗ ಎಲ್ಲಾ ನೆನಪಾಯಿತು, ನಾನು ಮನೆಗೆ ಬಂದು ಬಾಗಿಲು ತೆರೆದಾಗ ನನ್ನ ಕರುಳ ಬಳ್ಳಿ, ನನ್ನ ಕಣ್ಣು, ನನ್ನ ದೇವತೆ ಫ್ಯಾನಲ್ಲಿ ನೇತಾಡುತ್ತ ವಿಲವಿಲ ಒದ್ದಾಡುತ್ತಿದ್ದಳು, ಆ ದೃಶ್ಯ ಇನ್ನು ಕಣ್ಣಿಗೆ ಕಟ್ಟಿದ ಹಾಗೆ ಇದೆ. ‘ಅಯ್ಯೋ ಮಗುವೆ, ಯಾಕ್ಹೀಗೆ ಮಾಡಿದ್ಯಮ್ಮ? ಈ ಅಮ್ಮನ ಬಿಟ್ಟು ಯಾಕೆ ಹೀಗೆ ಮಾಡಿದೆ’. ನನಗಾಗ ಗಾಬರಿಯಾಗದೇ ಇದ್ದಿದ್ದರೇ ಮಗಳನ್ನು ಉಳಿಸುತ್ತಿದೆನೇನೋ, ಆ ಗಾಬರಿಯಿಂದ ಕೆಳಗೆ ಬಿದ್ದೆ, ನನ್ನ ಮಗಳ ಸಾವಿಗೆ ನಾನೆ ಕಾರಣವಾದೆ. ಇಲ್ಲಾ ಇನ್ನೊಂದು ಸ್ವಲ್ಪ ಹೊತ್ತು ಮೊದಲೇ ಬಂದಿದ್ದರೇ, ಅವಳು ಈ ಪ್ರಯತ್ನಕ್ಕೆ ಇಳಿಯುವುದಕ್ಕೆ ಅಡ್ಡಿಯಾಗುತ್ತಿದ್ದೆ, ನನ್ನ ಮನಸ್ಸು ಹೇಳಿತು ಸಂಕಟ ಪಡುತ್ತಾ ಹೇಳಿತು, ಹೋಗು ಮನೆಗೆಂದು, ನಾನೆ ತಡವಾಗಿ ಹೋದೆ, ಹೋಗುವಷ್ಟರಲ್ಲಿ ನನ್ನ ಕರುಳೆ ಇಲ್ಲವಾಯಿತೆ, ನಾನೆಂತ ಪಾಪಿ! ಮಗಳು ಒದ್ದಾಡುತ್ತ ನರಳಿ ನರಳಿ ಸಾಯುವುದನ್ನ ಕಣ್ಣಾರೆಕಂಡಿಯು ಏನು ಮಾಡಲಾಗದ ಅಸಹಾಯಕ ಪಾಪಿ ತಾಯಿ ನಾನು, 15 ವರ್ಷ ಕಣ್ಣಲ್ಲಿ ಕಣ್ಣಿಟ್ಟು , ಭವಿಷ್ಯವೇ ನೀನು ಮಗಳೇ ಎಂದು ಪ್ರೀತಿ ಎಲ್ಲಾ ಧಾರೆ ಎರೆದು ಬೆಳೆಸಿದ ನನ್ನ ಮಗು, ಬೇಡಿ ಬೇಡಿ ಪಡೆದ ವರ ಈಗ ? ನನ್ನನೋವನ್ನ ಹೇಗೆತೋಡಲಿ, ಯಾರಾದರು ನನ್ನನ್ನು ಕತ್ತರಿಸಿ ಬಿಸಾಡಬಾರದೆ ಆಗಲಾದರು ನೋವು ಕಡಿಮೆಯಾದೀತೇನೋ,
ಈ ಪಾಪಿ ಜನ್ಮ ಹೇಗೆ ಸಾಯುತ್ತೆ ಇಷ್ಟು ಬೇಗ, ಒಬ್ಬಳೇ ಒಬ್ಬಳು ಮಗಳು ಕಣ್ಮುಚ್ಚಿದಳು. ಪೊಲೀಸರು, ನೆಂಟರಿಶ್ಟರ ಕೊಂಕು ನೋಟಗಳು, ಪ್ರಶ್ನೆಗಳು, ನನಗೆ ಉಸಿರುಗಟ್ಟಿಸುತಿತ್ತು. ಬಂದವರೆಲ್ಲರು ‘ಸಮಾಧಾನ ಮಾಡಿಕೊಳ್ಳಿ, ಹೀಗಾಗ ಬಾರದಿತ್ತು, ಅಲ್ಲಾ ಈಗಿನ ಕಾಲದ ಮಕ್ಕಳಿಗೆ ಏನು ಅನ್ನೊಕ್ಕಾಗಲ್ಲ, ಹೇಡಿಗಳ ಹಾಗೆ ಪ್ರಾಣ ಕಳೆದುಕೊಳ್ಳುತ್ತಾರೆ, ಅಲ್ಲಾ ನೀವೇನಾದರು ಅಂದಿರಾ ಹೇಗೆ?’ ಕುತೂಹಲ, ಏನಾಯಿತೆಂದು ತಿಳಿಯದಿದ್ದರೆ ಬೇರೆಯವರ ಹತ್ತಿರ ಗಂಟೆಗಟ್ಟಲೆ ಚರ್ಚೆ ಮಾಡೋದಾದರು ಹೇಗೆ ಅಲ್ಲವೇ? ಇನ್ನು, ವಯಸ್ಸಿನ ಹೆಣ್ಣುಮಗಳು ಸತ್ತರೆ ಈ ಸಮಾಜದ ಆ ಅನುಮಾನದ ನೋಟ, ಅಸಹ್ಯ ಅರ್ಥ ಕಲ್ಪಿಸ ದುರ್ಭುದ್ದಿ, ಈ ನೋಟಗಳು ನನ್ನ ಮಗಳು ನೇಣು ಹಾಕಿ ಒದ್ದಾಡಿದ ದೃಶ್ಯಕ್ಕಿಂತ ಭಯಾನಕ, ಅಷ್ಟೇ ಹಿಂಸೆ ಕೊಡುತಿತ್ತು.
ಇವೆಲ್ಲದಕ್ಕಿಂತ ನನ್ನ ಕರುಳನ್ನು ನಾಟುವ ಮಾತುಗಳೆಂದರೇ, ನನ್ನ ಮಗಳನ್ನು ಹೇಡಿ, ಜೀವನ ಎದುರಿಸಲು ಆಗದೆ ಆತ್ಮಹತ್ಯೆ ಮಾಡಿಕೊಂಡಳು ಎಂಬ ನುಡಿಗಳು, ನನ್ನನ್ನು ಕಾಡುವ ಪ್ರಶ್ನೆಎಂದರೇ, ನಿಜಕ್ಕು ಒಬ್ಬ ವ್ಯಕ್ತಿ ಪ್ರಾಣ ಬಿಡುವುದು ಹೇಡಿ ಕಾರ್ಯವೇ, ನನ್ನ ಮಗಳು ನೇಣು ಹಾಕಿಕೊಂಡದನ್ನು ನೋಡೆ ಬಿದ್ದುಹೋದೆ ನಾನು, ನನಗಾಗಿ ನನ್ನ ಮಗಳಿಗಾಗಲಿ ರಕ್ತ ಎಂದರೇ ವಿಪರೀತ ಭಯ, ನನ್ನ ಮಗಳಿಗೆ ಒಂದು ಇಂಜೆಕ್ಷನ್ ಕೊಡಿಸುವುದಕ್ಕೆ, ನನ್ನ ಗಂಡ ಹರಸಾಹಸ ಪಡುತಿದ್ದರು, ಅವಳಿಗೆ ಒಂದು ಇಂಜೆಕ್ಷನ್ ಚುಚ್ಚಿಸಿಕೊಳ್ಳೋದಕ್ಕೆ ಭಯ, ಟೀವಿಯಲ್ಲಿ ಯಾರಾದರು ಸಾಯುವ ದೃಶ್ಯಕಂಡರೇ ನನ್ನ ಮಗಳು ಹೆದರಿ ನಡುಗುತಿದ್ದಳು, ಸಾವಿನ ಬಗೆಗೆ ಭಯ, ಹಾಗೆ ಬದುಕುವುದಕ್ಕೆ ಅಷ್ಟು ಆಸೆ ಇತ್ತು ನನ್ನ ಕಂದಮ್ಮನಿಗೆ. ಅಂತಹವಳು ಅಷ್ಟು ಭಯ ಇರುವವಳು ಹಗ್ಗಬಿಗಿದು ಕುತ್ತಿಗೆ ಕತ್ತರಿಸಿಕೊಳ್ಳುವ ನಿರ್ಧಾರ ತೆಗೆದುಕೊಂಡಳೆಂದರೇ, ಅವಳಿಗೆ ಅದೆಂತ ಧೈರ್ಯ ಬಂದಿರಬೇಕು, ನನ್ನ ಮಗಳನ್ನು ಕಳೆದುಕೊಂಡು ಕಂಗಾಲಾಗಿರುವ ನನಗೂ ಖಂಡಿತ ಜೀವ ತ್ಯಾಗ ಮಾಡುವ ಧೈರ್ಯ ಇಲ್ಲ. ಅದ್ಹೇಗೆ ಅವಳನ್ನು ಹೇಡಿ ಎನ್ನುತ್ತಾರೆ?
ನನ್ನ ಮಗಳು ಪ್ರಾಣತ್ಯಾಗ ಮಾಡುವ ದುಸ್ಸಾಹಸಕ್ಕೆ ಕೈ ಹಾಕಿದಳೆಂದರೇ, ಬದುಕುವುದು ಅದೆಷ್ಟು ನೋವಾಗಿತ್ತು ನನ್ನ ಕಂದಮ್ಮನಿಗೆ? ನೇಣು ಬಿಗಿದು ಒದ್ದಾಡಿ ಪ್ರಾಣವನ್ನಾದರು ಬಿಡುವೆ ಆದರೆ, ಬದುಕೋದು ಅಸಾಧ್ಯ ಎಂಬ ನಿರ್ಧಾರ ಬರುವ ಮುನ್ನ, ಅದೆಷ್ಟು ಅಸಹಾಯಕತೆ, ಅದೆಷ್ಟು ಹತಾಶೆ, ಜೀವನದಲ್ಲಿ ಜಿಗುಪ್ಸೆ ಬಂದಿರಬೇಡ? ಯಾಕೆ ಏನು ಎಂಬ ಪ್ರಶ್ನೆಗಳನ್ನು ಕೆದಕಿದಾಗ ಅವಳ ಸ್ನೇಹಿತರು, ಅವಳ ಶಿಕ್ಷಕರು ಎಲ್ಲರು ಒಂದೊಂದು ಬಗೆಯ ಉತ್ತರ ನೀಡಿದರು, ಕಾಲೇಜಿನಲ್ಲಿ ಅಂತದ್ದೇನು ನಡೆದಿರಲಿಲ್ಲ, ಆದರೆ ಇವಳಿಗು ಇವಳ ಸ್ನೇಹಿತೆಗು ಒಂದು ಜಗಳವಾಗಿದ್ದಾಗಿಯು, ಅದನ್ನು ಅವರಿಬ್ಬರು ಮಾತಾಡಿ ಬಗೆಹರಿಸಿಕೊಂಡಿದ್ದರು ಎಂದಿದ್ದು ತಿಳಿಯುತು. ಇನ್ನು ಡಾಕ್ಟರುಗಳು ಇದು ಮಾನಸಿಕ ಖಾಯಿಲೆಯು ಇರಬಹುದು, ಈ ವಯಸ್ಸಿನಲ್ಲಿ ಮಿದುಳಲ್ಲಿ ದೇಹದಲ್ಲಿ ನಾನ ಬದಲಾವಣೆಗಳಾಗುತ್ತಿರುತ್ತವೆ, ಅದರಿಂದ ಕೆಲವೊಮ್ಮೆ ಖಿನ್ನತೆಗೆ ಒಳಗಾಗಬಹುದು ಅದರಿಂದಲೂ ಹೀಗೆ ಮಾಡಿಕೊಳ್ಳಬಹುದು ಎಂದರು.
ಮಗಳನ್ನು ಕಳೆದುಕೊಂಡ ನಾನು ಅವಳ ಸಾವಿನ ಕಾರಣ ತಿಳಿದ ಮಾತ್ರಕ್ಕೆ ಮಗಳು ಮರಳುವುದಿಲ್ಲ, ನನಗೆ ತಿಳಿದಿರುವ ಕಾರಣ ಒಂದೇ, ನನ್ನ ಆ ಚಿಕ್ಕ ಮಗುವಿಗೆ, ಈ ಜಗತ್ತಿನಲ್ಲಿ ಇಷ್ಟು ಕೋಟಿಜನರಿರುವ ಈ ದೊಡ್ಡ ಪ್ರಪಂಚದಲ್ಲಿ ತಾನು ಅಸಹಾಯಕಳು, ತಾನು ಒಂಟಿ, ತನಗೆ ಸಾವು ಬಿಟ್ಟರೇ ಬದುಕಿನಲ್ಲಿ ಬೇರೆ ಎಲ್ಲಾ ದಾರಿಗಳು ಮುಚ್ಚಿಹೋಗಿವೆ ಎಂದೆನಿಸಿದೆ, ನನ್ನ ಮಗಳು ಹೇಡಿಯಲ್ಲ, ಅವಳದ್ದು ಹೇಡಿ ಕಾರ್ಯವು ಅಲ್ಲ, ಅದೊಂದು ದುಸ್ಸಾಹಸ, ನಾವು ಹೆತ್ತವರಾಗಿ ಅವಳಿಗೆ ಎಲ್ಲಾ ಸೌಲಭ್ಯಗಳನ್ನು ಒದಗಿಸದರೇ, ನಮ್ಮ ಕರ್ತವ್ಯ ಮುಗಿತು ಎಂದುಕೊಳ್ಳುತ್ತೇವೆ, ಅದರೇ ಅವರ ಭಾವನೆಗಳು, ಅವರ ಯೋಚನೆಗಳು, ಅವರ ಮಾನಸಿಕ ಬೆಳವಣಿಗೆಗೆ ಬೇಕಾಗಿರುವ ಆ ವಾತಾವರಣವನ್ನ ಕಲ್ಪಿಸಿಕೊಡುತ್ತಿದ್ದೇವ ಎಂಬ ಪ್ರಶ್ನೆ ಬಂದರೇ ಅದು ಪ್ರಶ್ನೆಯಾಗಿಯೇ ಉಳಿಯುತ್ತದೆ. ಅವರು ಓದಲ್ಲಿ ಮುಂದಿರಬೇಕು, ಅವರು ಎಲ್ಲಾ ತರಗತಿಯಲ್ಲೂ ಮುಂದಿರಬೇಕು, ಅವರನ್ನು ನಾಲ್ಕು ಜನರು ಮೆಚ್ಚಬೇಕು, ಆಗ ನಮಗೆ ಹೆಮ್ಮೆ, ಆಗ ನಮಗೆ ಒಳ್ಳೇ ಮಕ್ಕಳು ಹುಟ್ಟೀದ್ದಾರೆಂದು ಮೆರಿತೀವಿ, ಆದರೆ ನಮ್ಮ ಮಕ್ಕಳ ಮನಸ್ಸಲ್ಲಿ ಏನಿದೆ, ಅವರ ಅವಶ್ಯಕತೆ ಏನು, ಅವರಿಗೆ ನಿಜವಾದ ಖುಷಿ ಯಾವುದರಲ್ಲಿ ಇದೆ ಎಂದು ಅರಿಯುವ ಗೋಜಿಗೆ ಹೋಗುತ್ತೇವ? ನಮ್ಮ ಖುಷಿಯೆ ಅವರ ಖುಷಿ ಆಗುವುದೇ? ನಮ್ಮ ಖುಷಿ ಅವರು ನೆರವೇರಿಸಲಿ ಎಂಬ ನಮ್ಮ ನಿರೀಕ್ಷೆಗಳಿಗೆ ಅವರಿಗೆ ಎಲ್ಲಾ ಕೊಡಿಸಿ ನಂತರ ಇಷ್ಟೆಲ್ಲಾ ಮಾಡಿದರು ನಾವು ಅಂದುಕೊಂಡಂತೆ ಬೆಳೆಯುತ್ತಿಲ್ಲಾ ಎಂದು ಅವರನ್ನು ಟೀಕಿಸುತ್ತಿದ್ದೀವ? ಹೋಗಲಿ ಅವರನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದೀವ ಅಥವಾ ಅವರೇ ನಮ್ಮನ್ನು ಅರ್ಥ ಮಾಡಿಕೊಳ್ಳಲಿ ಎಂದು ಬಯಸುತ್ತಿದ್ದೀವ? ಎಲ್ಲಾ ಪ್ರಶ್ನೆಗಳೇ..
ಇದೀಗ ಟೀಕೆ, ಕೊಂಕು ನೋಟಗಳ ನಡುವೆ, ನನ್ನ ಮಗಳಿಗೆ ಒಳ್ಳೆ ತಾಯಿಯಾಗಲಿಲ್ಲವೇ ಎಂಬ ಪಾಪಪ್ರಜೆÐಯ ಪ್ರಶ್ನೆಯಷ್ಟೆ ನನ್ನ ಪಾಲಿಗೆ ಉಳಿದಿದೆ. ಬರುಡಾದ ಈ ಕರುಳಿಗೆ ನನ್ನ ಮಗಳ ನೆನೆಪು, ನನ್ನ ಮಗಳ ನಗುವಷ್ಟೇ ಆಸರೆ.