Sunday, January 20, 2019

ಅನಾಮಿಕಳ ಅಂತರಂಗ




ಇವತ್ತು ನನಗೆ ಬಹಳ ಖುಷಿಯಾಗ್ತಿದೆ. ಒಂದು ಕೆಲಸದ ಇಂಟವ್ರ್ಯೂ ಎದುರಿಸಿದ್ದೇ  ಇವತ್ತಿನ ನನ್ನ ಖುಷಿಗೆ ಕಾರಣ ಅಂತಂದ್ರೆ ನಂಬುತ್ತೀರಾ? ಹೌದು ದೂರದಿಂದ ನೋಡಿದವರಿಗೆ ಒಳ್ಳೆ ಅಂಕ ಪಡೆಯುವ ನನ್ನಂತಹ ವಿದ್ಯಾರ್ಥಿ ಒಂದು ಕೆಲಸ ಗಿಟ್ಟಿಸಿಕೊಳ್ಳೋದು ಖಂಡಿತ ದೊಡ್ಡವಿಷಯವಲ್ಲ. ಆದರೆ ಹತ್ತಿರದಿಂದ ಬಹಳ ಹತ್ತಿರದಿಂದ ನನ್ನ ಬಲ್ಲವರಿಗೆ ಅಂತಂದ್ರೆ ನನಗೆ ಮಾತ್ರ ಗೊತ್ತಿದೆ ಈ ಹಂತಕ್ಕೆ ಬರಲು ನಾನು ಎಂತಹ ದೊಡ್ಡ ಹೋರಾಟ ಮಾಡಬೇಕಾಯಿತೆಂದು. ಆ ಹೋರಾಟ ಸಮಾಜದ ವಿರುದ್ಧವೊ, ಕುಟುಂಬದ ವಿರುದ್ಧವೋ ಅಥವಾ ಮತ್ಯಾರದ್ದೋ ವಿರುದ್ಧವೋ ಅಲ್ಲ; ಈ ಹೋರಾಟ ನನ್ನ ವಿರುದ್ಧವೇ. 
ನಾನು ಮಧ್ಯಮ ವರ್ಗದ ಕುಟುಂಬಕ್ಕೆ ಸೇರಿದವಳು. ನನ್ನ ಅಪ್ಪ ಬ್ಯಾಂಕ್ ಉದ್ಯಮಿ, ಅಮ್ಮ ಗೃಹಿಣಿ. ನನಗೆ ಯಾವುದಕ್ಕೂ ಕೊರತೆ ಬಾರದ ಹಾಗೆ ನನ್ನ ಪೋಷಕರು ನನ್ನನ್ನು ಸಲಹುತ್ತಿದ್ದರು. ಎಲ್ಲಾ ಮಕ್ಕಳಂತೆ ಬೆಳೆಯುತಿದ್ದ ನಾನು, ಆಟ ಪಾಠಗಳಲ್ಲಿ ಸದಾ ಮುಂದು. ಆಗ ನಾನು 7ನೇ ತರಗತಿಯಲ್ಲಿದ್ದೆ, ಆಗಿನ್ನು ಪ್ರೌಢಾವಸ್ತೆಗೆ ಕಾಲಿಟ್ಟಿದೆ.್ದ ದೇಹದಲ್ಲಿ ವಿವಿಧ ಬದಲಾವಣೆಗಳು ಹಾಗೆಯೇ ಮನಸ್ಸಿನಲ್ಲಿಯೂ ನಾನಾ ಕುತೂಹಲಗಳು. ನಮ್ಮ ಮನೆಯ ಎದುರು ಮನೆಗೆ ನವ ವಿವಾಹಿತ ಜೋಡಿ ಬಾಡಿಗೆಗೆ ಬಂದರು. ನನ್ನ ಕೋಣೆಯ ಎದುರಿಗೆ ಅವರ ಕೋಣೆ ಇತ್ತು. ಅವರೆಂದಿಗು ಕಿಟಕಿ ಮುಚ್ಚದ ಕಾರಣ, ನನಗೆ ಅವರ ಕೋಣೆಯಲ್ಲಿನ ಸರಸ ಸಲ್ಲಾಪಗಳು ಕಾಣುತಿತ್ತು. ಅದಾಗಲೇ ಸಾಕಷ್ಟು ಕುತೂಹಲಗಳಲ್ಲಿ ಮಿಂದಿದ್ದ ನನ್ನ ಮನಸ್ಸಿಗೆ ಇದು ಮತ್ತಷ್ಟು ಕೋಲಾಹಲ ಎಬ್ಬಿಸಿತು. ಈ ಅನುಭವ ನನಗಾದಲ್ಲಿ ಹೇಗಿರುತ್ತದೆ ಎಂಬ ಆಲೋಚನೆಗಳೊಡನೆ ಕಲ್ಪನೆಗಳು ವಿಹರಿಸ ತೊಡಗಿದವು. ಸಂಪ್ರದಾಯಸ್ತ ಕುಟುಂಬದವಳಾದ ನಾನು ಅಮ್ಮನ ಹತ್ತಿರ ನನ್ನ ಕುತೂಹಲಗಳನ್ನೂ ನನ್ನ ಆಲೋಚನೆಗಳನ್ನು ಹಂಚಿಕೊಳ್ಳುವ ಧೈರ್ಯಮಾಡಲಿಲ್ಲ.
ಹೀಗಿರುವಾಗಲೆ ಎದುರು ಮನೆಯವರು ನಮ್ಮ ಮನೆಗೆ ಚಿರಪರಿಚಿತರಾದರು. ಹಾಗೆ ಎದುರು ಮನೆಯವ ನನ್ನೊಟ್ಟಿಗೆ ಬಹಳ ಸಲಿಗೆಯಿಂದ ನಡೆದುಕೊಳ್ಳುತಿದ್ದ. ಅದು ನನಗು ಹಿಡಿಸಿತ್ತು. ಆ ದಿನ ನಮ್ಮ ಮನೆಯಲ್ಲಿ ಅಪ್ಪ ಅಮ್ಮ ಯಾರು ಇರಲಿಲ್ಲ. ಎದುರು ಮನೆಯವ ಅಪ್ಪನೊಂದಿಗೆ ಏನೋ ಮಾತನಾಡಬೇಕೆಂದು ಮನೆಗೆ ಬಂದ. ಅಪ್ಪ ಮನೆಯಲ್ಲಿ ಇಲ್ಲವೆಂದರೂ ಒಳಗೆ ಬಂದ. ನನಗೆ ಏನು ಹೇಳಬೇಕು ತಿಳಿಯದಾದೆ. ಬಂದವನೇ ನಮ್ಮ ಮನೆಯ ಬಾಗಿಲು ಹಾಕಿ ನನ್ನನ್ನು ಅವನೆಡೆಗೆ ಬರಮಾಡಿಕೊಂಡ. ಒಂದೆಡೆ ಅವನನ್ನು ತಡೆಯಬೇಕೆಂದೆನಿಸಿದರು ಅದ್ಯಾಕೊ ಗೊತ್ತಿಲ್ಲ ನಾನು ಅವನನ್ನು ತಡೆಯಲಿಲ್ಲ. ಈ ಘಟನೆಯಾಗಿ ಸ್ವಲ್ಪ ದಿನದಲ್ಲೇ ಅವನು ಮನೆ ಕಾಲಿಮಾಡಿಕೊಂಡು ಹೊರಟು ಹೋದ. ಆದರೆ ನನ್ನ ಮನಸಿನಲ್ಲಿ ಎಂದೂ ಮಾಂiÀiದ ಶಾಶ್ವತಗಾಯವಾಗಿ ಉಳಿದುಬಿಟ್ಟ. ನನ್ನ ನಿಷ್ಕಲ್ಮಶ ಮನಸ್ಸಿನಲ್ಲಿ ದೊಡ್ಡ ಅಲೆಯೊಂದನ್ನು ಎಬ್ಬಿಸಿ ಬಿಟ್ಟ. ನನಗೆ ನನ್ನ ದೇಹದ ಮೇಲೆ ಅಸಹ್ಯ ಶುರುವಾಯಿತು. ಅಪ್ಪ ಅಮ್ಮನಿಗೆ ಮೋಸ ಮಾಡಿದ ಅಪರಾಧಿ ಪ್ರಜ್ಞೆ ನನ್ನನ್ನು ಕಾಡಲಾರಂಭಿಸಿತು. ಆದರೆ ಎಲ್ಲರ ಮುಂದೆ ನಗು ಮೊಗದಿಂದ ಇರುತಿದ್ದೆ. ಆಟ ಪಾಠಗಳಲ್ಲಿನ ನನ್ನ ಮೊದಲಿನ ಆಸಕ್ತಿ ಕ್ರಮೇಣವಾಗಿ ಕ್ಷೀಣಿಸುತ್ತ ಬಂದಿತು. ಕಾಲೇಜು ಮೆಟ್ಟಿಲೇರುವಷ್ಟರಲ್ಲಿ ಕೀಳರಿಮೆ ಅಪನಂಬಿಕೆಗಳು ನನ್ನ ಮನೆಮಾಡಿತ್ತು. ನನ್ನ ಬಗ್ಗೆಯೇ ಸ್ಪಷ್ಟತೆ ಇಲ್ಲದಾಗ ಸ್ನೇಹಿತರ ಸಹವಾಸ ನನ್ನ ಮನಸ್ಸಿಗೆ ಮುದ ನೀಡಿತ್ತು. ನನ್ನ ಜಗತ್ತೆಲ್ಲಾ ಅವರೇ ಆವರಿಸಿಕೊಂಡಿದ್ದರು. ಮನೆಗೆ ಹೋದರೆ ಹಳೇ ನೆನಪುಗಳು ಪಾಪಪ್ರಜೆÐಯಾಗಿ ಕಾಡುತಿದ್ದವು. ಅವುಗಳನ್ನು ಹತ್ತಿಕ್ಕಲು ಸ್ನೇಹಿತರೊಂದಿಗೆ ಹೆಚ್ಚೆಚ್ಚು ಸಮಯ ಕಳೆಯಲಾರಂಭಿಸಿದೆ. ನನ್ನ ಸ್ನೇಹಿತರು ಹೇಳಿದ ಹಾಗೆ ಕೇಳದಲ್ಲಿ ಅವರನ್ನು ಕಳೆದುಕೊಂಡು ಒಂಟಿಯಾಗಿಬಿಡುವ ಭಯದಿಂದ ಅವರು ಏನು ಹೇಳಿದರು ಮಾಡಲಾರಂಭಿಸಿದೆ. ಸ್ನೇಹದ  ಹೆಸರಲ್ಲಿ ನನ್ನನ್ನು ಅಡ್ಡದಾರಿಗೆ ಎಳೆಯುತ್ತಿದ್ದಾರೆ ಎಂಬುದರ ಅರಿವಿದ್ದರೂ ನಾನು ಸುಮ್ಮನಿರುತ್ತಿದ್ದೆ. ಹೀಗೆ ಪಾಪಪ್ರಜ್ಞೆ, ಒಂಟಿತನಕ್ಕೆ ಅಂಜಿ ನನ್ನ ಮೇಲಿನ ಪೂರ್ತಿ ನಿಯಂತ್ರಣ ಕಳೆದುಕೊಂಡು ನಮ್ಮ ಮನೆಯವರೆಲ್ಲರ ಮೇಲೆ ಅಸಹನೆಯಿಂದ ವರ್ತಿಸುತಿದ್ದೆ. ಅವರು ಏನೆಂದರೂ ಕೋಪಗೊಳ್ಳುತಿದ್ದೆ. ಹೀಗಿರುವಾಗಲೆ ಇಂಜಿನಿಯರಿಂಗ್ ಕೂಡ ಮುಗಿಸಿಕೊಂಡೆ. ಆದರೆ ಕೆಲಸ ಮಾಡಲು ಧೈರ್ಯ ಸಾಲಲಿಲ್ಲ. ಸುಮ್ಮನೆ ಮನೆಯಲ್ಲೇ ಕುಳಿತು ಬಿಟ್ಟೆ. ಸ್ನೇಹಿತರೊಂದಿಗೆ ಇಷ್ಟವಿಲ್ಲದ ದಾರಿಗೆ ಹೋಗಲು ಮನಸ್ಸಾಗಲಿಲ್ಲಾ. ಮೊಬೈಲ್ ಆಫ್ ಮಾಡಿ ಹೊರಿಗಿನವರ ನೆರಳೆ ಬೀರದಂತೆ ಉಳಿದು ಬಿಟ್ಟೆ.
ಸದಾ ಲವಲವಿಕೆಯಿಂದ ಇದ್ದ ಮಗಳು ಮನೆಯಲ್ಲೇ ಉಳಿದು ಬಿಟ್ಟಾಗ ಸಹಜವಾಗಿಯೆ ನನ್ನ ಪೋಷಕರಿಗೆ ಆತಂಕ ಶುರುವಾಯಿತು. ನನ್ನ ಸಮಸ್ಯೆಗೆ ಅವರು ಕಂಡುಕೊಂಡ ಉತ್ತರ ನನ್ನ ಮದುವೆ. ನನಗೊಂದು ಮದುವೆ ಮಾಡಿಬಿಟ್ಟರೆ ಎಲ್ಲಾ ಸರಿ ಹೋಗಿಬಿಡುತ್ತದೆ ಎಂದು ಅವರು ಬಲವಾಗಿ ನಂಬಿದ್ದರು. ಅಂತೆಯೆ ನನಗೆ ಸೂಕ್ತವಾದ ವರಾನ್ವೇಷಣೆಗೆ ಸಜ್ಜಾದರು. ಈ ವಿಷ್ಯ ನನ್ನ ಗಮನಕ್ಕೆ ಬಂದೊಡನೆಯೇ ನನ್ನ ಮೈ ಕಂಪಿಸಿತು. ಭಯದಿಂದ ಬೆವೆತು ಹೋದೆ, ಭಯ ಹೋಗಿ ವಿಪರೀತ ಸಿಟ್ಟು ಬಂತು ಮನೆಯ ಸಾಮನ್ನೆಲ್ಲ ಒಡೆದು ಹಾಕಿ ರಂಪಾಟ ಮಾಡಿಬಿಟ್ಟೆ. ಎದುರು ಮನೆಯವನ ನಡವಳಿಕೆ, ನನ್ನ ಗೆಳೆತನದ ದುರುಪಯೋಗ ಪಡಿಸಿಕೊಂಡ ನನ್ನ ಗೆಳೆಯರನ್ನು ಕಂಡ ನಾನು, ಗಂಡಸರ ನೆರಳನ್ನು ಕಂಡರೂ ದ್ವೇಷಿಸುತಿದ್ದೆ. ಇದು ಸಾಲದಕ್ಕೆ ನನ್ನ ದೇಹದ ಮೇಲಿದ್ದ ಅಸಹ್ಯ, ಮುಂದೆ ಬರುವ ಗಂಡನೆದುರು ಕೀಳಾಗಿ ಬಿಡುವ ಭಯದಿಂದ ನನಗೆ ಮದುವೆಯ ಮೇಲೆ ನಂಬಿಕೆ ಇರಲಿಲ್ಲಾ.
ಈ ಘಟನೆಯ ನಂತರ ಮತ್ತಷ್ಟು ಕುಗ್ಗಿಹೋದೆ. ಅಲ್ಲಿಂದ ಅಜ್ಜಿ ಮನೆಗೆ ಹೊರಟು ಹೋದೆ. ದಿನೇ ದಿನೇ ಹೆಚ್ಚುತ್ತಿರುವ ನನ್ನ ಆಕ್ರೋಷವನ್ನು ಕಂಡ ಅಮ್ಮ, ನನ್ನಲ್ಲಿ ಏನೋ ಅಸಹಜವಾಗಿದೆ ಎಂದು ಗುರುತಿಸಿ ನನ್ನನ್ನು ಒಬ್ಬ ಆಪ್ತಸಮಾಲೋಚನೆತಜ್ಞರ ಬಳಿ ಕರೆದುಕೊಂಡು ಹೋದರು. ಇಷ್ಟರಲ್ಲಾಗಲೆ ನನ್ನ ಮನಸ್ಸು ನಾನು ಬದಲಾಗಬೇಕು ಆದರೆ ಹೇಗೆ ಎಂಬ ಬಗೆ ಹುಡುಕುತಿತ್ತು. ನಂತರ ಆಪ್ತ ಸಮಾಲೋಚನೆಗಾರರಿಗೆ ನನ್ನ ವಿಷಯಗಳನೆಲ್ಲಾ ಹಂಚಿಕೊಂಡೆ. ಮನಸ್ಸು ನಿರಾಳವಾಯ್ತು. ನಿಧಾನವಾಗಿ ನಾನು ನನ್ನ ಪಾಪ ಪ್ರಜ್ಞೆಯಿಂದ ಹೊರ ಬರಲಾರಂಭಿಸಿದೆ. ನಡೆದು ಹೋದ ಘಟನೆಗೆ ಚಿಂತಿಸಿ ಫಲವಿಲ್ಲ ಮುಂದೆ ಜೀವನದಲ್ಲಿ ಎಡವದಂತೆ ಎಚ್ಚರ ವಹಿಸುವೆ ಎಂದು ನಿರ್ಧರಿಸಿದೆ. ಇದರಿಂದ ನಿಧಾನವಾಗಿ ನಾನು ನನ್ನನ್ನು ಪ್ರೀತಿಸತೊಡಗಿದೆ.
 ಇವತ್ತಿಗೆ ನನ್ನ ದೇಹದ ಮೇಲೆ ಯಾವುದೆ ರೀತಿಯ ಅಸಹ್ಯ ನನಗಿಲ್ಲ. ಯಾರೆ ನನ್ನ ಸ್ನೇಹಿತರು ಕರೆ ಮಾಡಿದರೂ, ನಾನು ಯಾವುದೆ ಅಳುಕಿಲ್ಲದೆ ನನ್ನ ಅನಿಸಿಕೆಗಳನ್ನು ನೇರವಾಗಿ ಉತ್ತರಿಸುವುದನ್ನು ಕಲೆತೆ. ಮತ್ತೆ ನನ್ನ ಜೀವನದಲ್ಲಿ ಏನಾದರು ಸಾಧಿಸಬೇಕೆಂಬ ಆಸೆ ಮೊಳಕೆಯೊಡೆಯಲಾರಂಭಿಸಿತು. ಈ ಹಂತದಲ್ಲಿ ನನ್ನ ಪೋಷಕರು ನನಗೆ ಯಾವುದೇ ರೀತಿಯ ಒತ್ತಡ ಬಲವಂತಗಳನ್ನು ಹೇರದೆ, ನಾನು ಬದಲಾಗುವುದಕ್ಕೆ ಸಮಯ ಕೊಟ್ಟರು. ಆಚೆ ಸಂಬಂಧಿಕರು, ಸ್ನೇಹಿತರು ನನ್ನ ಮದುವೆಯ ವಿಷ್ಯ ಪ್ರಸ್ತಾಪಿಸಿದಾಗಲೆಲ್ಲಾ ‘ಆಕೆ ಮೊದಲು ತನ್ನ ಕಾಲ ಮೇಲೆ ನಿಂತುಕೊಳ್ಳಲಿ ನಂತರ ಮದುವೆ ಮಾಡೋದು ಇದ್ದೇ ಇದೆ’ ಎಂದು ಉತ್ತರಿಸುತ್ತಿದ್ದರು. ಈ ವಾತಾವರಣದಿಂದ ನನ್ನ ಮನಸ್ಸಿಗೆ ಹಗುರವಾಯ್ತು. ಅದಾಗಲೇ ನನ್ನ ಜೊತೆ ಓದಿದವರೆಲ್ಲಾ ಕೆಲಸ ಮಾಡಿ ಮುಂದುವರೆದಿದ್ದರೇ, ನಾನು ಒಂದು ವರುಷ ಹಾಗೆ ಕಾಲಿ ಇದ್ದೇ. ಎಷ್ಟೋ ಜನ ನನ್ನನ್ನು ನೋಡಿ ನಕ್ಕದ್ದು ಇದೆ. ಕೈಲಾಗದವಳೆಂದು ಹೀಯಾಳಿಸಿದ್ದೂ ಇದೆ. ಆದರೆ ಅದು ನನಗೆ ಈ ಬಾರಿ ಧೃತಿಗೆಡುವ ಹಾಗೆ ಮಾಡಲಿಲ್ಲ, ಬದಲಿಗೆ ನಿಧಾನವಾಗಿಯಾದರೂ ನನ್ನ ಜೀವನದಲ್ಲಿ ಏನಾದರು ಸಾಧಿಸಬೇಕೆಂಬ ನನ್ನ ಬಯಕೆಗೆ ಮತ್ತಷ್ಟು ಪುಷ್ಠಿ ನೀಡಿತು.
ಮಾನಸಿಕ ನರಕ ಯಾತನೆ ಅನುಭವಿಸಿದ್ದ ನನಗೆ, ಮನಸ್ಸನ್ನು ಮೊದಲು ಹತೋಟಿಗೆ ತೆಗೆದುಕೊಳ್ಳುವುದೇ ನಿಜವಾದ ಸಾಧನೆಯಾಗಿದೆ. ನಮ್ಮ ಮನಸ್ಸು ನಮಗೆ ಬೆಂಬಲಿಸಿದರೆ ಎಲ್ಲವು ಸಾಧಿಸಬಹುದೆಂಬ ಅರಿವು ನನಗಾಗಿದೆ. ನಾನು ದಿನೇ ದಿನೇ ನನ್ನ ಬಗ್ಗೆ ಹೆಚ್ಚು ಅರಿಯುತ್ತಿದ್ದೇನೆ. ಇವತ್ತಿಗೆ ಕೆಲಸಕ್ಕೆ ಸಂದರ್ಶನ ಕೊಡುವಷ್ಟು ಸುಧಾರಿಸಿದ್ದೇನೆ. ಈ ಅನುಭವದಲ್ಲಿ ನಾನು ಯಾರನ್ನು ಜಡ್ಜ್ ಮಾಡಬಾರದೆಂದು ಅರಿತಿದ್ದೇನೆ. ನಮ್ಮನ್ನು ನಾವು ಪ್ರೀತಿಸಬೇಕೆಂದು ಕಲಿತಿದ್ದೇನೆ. ಆದ್ದರಿಂದಲೇ ನನ್ನ ಘಟನೆಗಳಿಂದ ಜನ ನನ್ನ ಬಗ್ಗೆ ಏನಂದುಕೊಂಡುಬಿಡುತ್ತಾರೋ ಎಂಬ ಯಾವುದೇ ಅಳುಕಿಲ್ಲದೇ ನನ್ನ ಜೀವನದ ಅನುಭವವನ್ನು ಹಂಚಿಕೊಂಡಿದ್ದೇನೆ.



Thursday, January 10, 2019




   
ಅನಾಮಿಕನ ಅಂತರಂಗ


ಮಗು ಹುಟ್ಟಿದ ತಕ್ಷಣ ಅತ್ತರೆ ಎಲ್ಲರು ಸಂಭ್ರಮಿಸುತ್ತಾರೆ. ಅದೇ ಅಳಲಿಲ್ಲ ಎಂದರೇ ಎಲ್ಲರಿಗು ದಿಗಿಲಾಗುತ್ತದೆ. ಒಟ್ಟಾರೆ ಮಗು ಗಂಡಾಗಲಿ, ಹೆಣ್ಣಾಗಲಿ ಅಳುವುದು ಪ್ರಕೃತಿ ಧರ್ಮ. ಅದು ಮಗುವಿನ ಸಂವಹನದ ವಿಧ. ನಮ್ಮಲ್ಲಿ ಹೆಣ್ಣುಮಕ್ಕಳು ಅತ್ತರೆ ಎಲ್ಲರು ಕಣ್ಣೊರೆಸಲು ಮುಂದಾಗುತ್ತೇವೆ. ಅದೇ ಒಬ್ಬ ಹುಡುಗ ಅತ್ತರೇ..? ಹೌದು ನಾನೊಬ್ಬ ಹುಡುಗ. ನಾನು ಹುಡುಗ ಆಗಿದ್ದೇ ಎಷ್ಟೋ ಬಾರಿ ನನಗೆ ಶಾಪದಂತೆ ತೋರಿದೆ. ನಾನು ಸೂಕ್ಷ್ಮ ಜೀವಿ, ಎಲ್ಲಾ ರೀತಿಯ ಭಾವನೆಗಳನ್ನು ವ್ಯಕ್ತಪಡಿಸುವುದು ನನ್ನ ಸ್ವಭಾವ. ಆದರೆ ಅಳುವುದಕ್ಕೆ ನಾನು ಪಡುತ್ತಿದ್ದ ಕಷ್ಟ ಅಷ್ಟಿಷ್ಟಲ್ಲ, ನನ್ನ ಭಾವನೆಯನ್ನು ವ್ಯಕ್ತಪಡಿಸಲಾಗದೆ ಅನುಭವಿಸಿದ ಆ ಮೂಕ ವೇದನೆಯನ್ನು ನಾನು ಹಂಚಿಕೊಂಡಿದ್ದೇನೆ.
ನನಗಾಗ 4 ವರ್ಷವಿರಬೇಕು ನಾನು ನನ್ನ ಅಕ್ಕನ ಜೊತೆ ಆಟವಾಡುವಾಗ ರೋಡ್‍ನಲ್ಲಿ ಬಿದ್ದುಬಿಟ್ಟೆ. ನನ್ನ ಮಂಡಿಯಲ್ಲಿ ಗಾಯವಾಗಿ ರಕ್ತಬಂದಿತು. ನನಗೋ ವಿಪರೀತ ಗಾಬರಿ, ನನಗೇನೊ ಆಗೋಗಿದೆ ಎಂದುಕೊಂಡು ಜೋರಾಗಿ ಅಳಲು ಶುರುಮಾಡಿಬಿಟ್ಟೆ. ನನ್ನ ಅಳಲನ್ನು ಕೇಳಿದ ನನ್ನ ತಂದೆ ಗಾಬರಿಯಿಂದ ಓಡಿ ಬಂದರು. ಬಂದವರೇ ಏನಾಯ್ತು ಎಂದು ವಿಚಾರಿಸಿದರು ನಾನು ನನ್ನ ಗಾಯವನ್ನು ತೋರಿಸಿದೆ. ಅವರು ಸಿಟ್ಟಲ್ಲೀ ಇಷ್ಟು ಚಿಕ್ಕ ಗಾಯಕ್ಕೆ ಒಳ್ಳೆ ಹುಡುಗಿ ತರಹ ಅಳೋz?À ಎಂದು ರೇಗಿಬಿಟ್ಟರು. ಆದರೆ ನನಗೆ ಹುಡುಗರು ಹೇಗೆ ಅಳಬೇಕು ಎಂದು ಹೇಳಿಕೊಡಲಿಲ್ಲ. ಮನೆಯಲ್ಲಿ ಅಕ್ಕ ತನಗೇನೆ ಕೆಲಸವಾಗಬೇಕಿದ್ದರು ಬಳಸುತ್ತಿದ್ದ ಏಕೈಕ ಬ್ರಹ್ಮಾಸ್ತ್ರ ಅದು ತನ್ನ ಅಳು. ಆದರೆ ನಾನು ಯಾವುದೇ ವಿಚಾರಕ್ಕೆ ಅತ್ತರು ಬೈಗುಳ ತಪ್ಪಿದಲ್ಲ. ‘ಹುಡುಗ ಆಗಿ ಅಳ್ತಿಯಲ್ಲಾ ಚೀ’ ಎಂಬ ಮಾತುಗಳು ಸರ್ವೆಸಾಮಾನ್ಯವಾಗಿದ್ದವು. ಹೀಗೆ ಬರುಬರುತ್ತಾ ನಾನು ಎಲ್ಲರ ಮಾತಿಗೆ ಅಂಜಿ ಎಲ್ಲರ ಮುಂದೆ ಅಳುವುದನ್ನೆ ನಿಲ್ಲಿಸಿಬಿಟ್ಟೆ. ಹುಡುಗ ಆದವನು ಎಲ್ಲಾ ಪರಿಸ್ಥಿತಿಗಳನ್ನು ಮನಗುಂದದೇ ಎದುರಿಸುತ್ತಾನೆ ಹೊರೆತು, ಹೆದರಿ ಅಳುತ್ತಾ ಕೂರುವುದಿಲ್ಲಾ ಎಂದು ಅಪ್ಪಾ ಯಾವಾಗಲು ಬೋದಿಸುತ್ತಿದ್ದರು. ನನ್ನ ಮನದಲ್ಲಿ ಅಳುವ ಹಕ್ಕು ಹೆಂಗಸರದ್ದೇ ಹೊರೆತು ಗಂಡಸರದಲ್ಲಾ ಎಂದು ಅಚ್ಚಾಗಿ ಉಳಿದುಬಿಟ್ಟಿತು. ಒಂದು ವೇಳೆ ನಾನು ಅತ್ತರೆ ನನ್ನನ್ನು ಹೆದರು ಪುಕ್ಕಲ, ಕೈಲಾಗದವನೆಂದು ಅಳೆದುಬಿಡುತ್ತಾರೆ ಎಂಬ ಅಳುಕು ಶುರುವಾಗಿತ್ತು. ನನ್ನ ಸಾಮಥ್ರ್ಯಕ್ಕೂ ಅಳುವಿಗು ಎತ್ತಣ ಸಂಬಂಧ ಎಂಬ ಪ್ರಶ್ನೆಗಳು ಬಂದರೂ ನಾನು ಎಂದಿಗು ಉತ್ತರ ಹುಡುಕುವ ಗೋಜಿಗೆ ಹೋಗಲಿಲ್ಲ.
ಆದರೆ ನನ್ನ ಗುಣ ಬದಲಾಯಿಸಿಕೊಳ್ಳುವುದು ಅಷ್ಟು ಸುಲಭವಾಗಿರಲಿಲ್ಲ. ಹಾಗಂತ ಎಲ್ಲರ ಮುಂದೆ ಅಳುವ ಧೈರ್ಯವು ನನಗಿರಲಿಲ್ಲಾ. ನಾನು ಅದಕ್ಕಾಗಿ ಕಂಡುಕೊಂಡ ಮಾರ್ಗೊಪಾಯ ಮಾತ್ರ ಕಠಿಣವಾದದ್ದು. ಒಂದು ವೇಳೆ ಯಾವುದಾದರು ಘಟನೆಯಿಂದ ನನಗೆ ಅಳು ಬಂದರೇ ನಾನು ತಕ್ಷಣವೇ ಯಾರು ಇಲ್ಲದ ಸ್ಥಳವನ್ನು ಹುಡುಕುತ್ತಿದ್ದೆ. ಅದರಲ್ಲೂ ಕತ್ತಲಿರಬೇಕಿತ್ತು. ಬೆಕ್ಕು ಕಣ್ಣು ಮುಚ್ಚಿಕೊಂಡು ಹಾಲುಕುಡಿಯುವ ಹಾಗೆ, ನಾನು ಯಾರು ಇಲ್ಲದ ಕತ್ತಲ ಕೋಣೆಯನ್ನು ಹುಡುಕಿ, ಕಣ್ಣುಮುಚ್ಚಿಕೊಂಡು ಮನಸ್ಸೋ ಇಚ್ಚೆ ಅತ್ತು ಮನಸ್ಸು ಹಗುರ ಮಾಡಿಕೊಂಡು ಬರುತಿದ್ದೆ. ಆದರೆ ಎಲ್ಲಾ ಸಂದರ್ಭದಲ್ಲೂ ಯಾರು ಇಲ್ಲದ ಕೋಣೆ ಸಿಗುತ್ತಿರಲಿಲ್ಲ, ಅಂತಹ ಪರಿಸ್ಥಿತಿಗಳಲ್ಲಿ ನನ್ನ ಸಂಕಟ ಹೇಳತೀರದು. ಎಷ್ಟೋ ಸಂದರ್ಭದಲ್ಲಿ ನನಗೆ ನಾನೆ ಕಚ್ಚಿಕೊಂಡು, ಚುಚ್ಚಿಕೊಂಡಿ ಇನ್ಯಾವುದೋ ಬಗೆಯಲ್ಲಿ ನನ್ನ ದೇಹಕ್ಕೆ ಹಿಂಸಿಸಿಕೊಂಡು ಅಳುವನ್ನು ಬಿಗಿಹಿಡಿದದ್ದು ಇದೆ. ನಂತರ ಒಂದು ಕೋಣೆ ಸಿಗುವವರೆಗು ನಾನು ಪಡುತ್ತಿದ್ದ ಹಿಂಸೆ ಮಾತ್ರ ಆ ದೇವರಿಗೆ ಪ್ರೀತಿ. ಮುಂದೆ ನನ್ನ ಈ ಅಳುವ ವಿಧ ನನಗೇ ಹವ್ಯಾಸವಾಗಿ ಬಿಟ್ಟಿತ್ತು. ನನಗೇನಾದರು ಅಳು ಬಂದರೇ ಒಂದು ಕತ್ತಲ ಕೋಣೆಯಲ್ಲಿ ಅಳುವವರೆಗು ಬೇರೆ ಯಾವ ವಿಷಯದಲ್ಲೂ ಗಮನಹರಿಸಲಾಗದಷ್ಟರ ಮಟ್ಟಿಗೆ ಹೋಗಿತ್ತು. ಅಳುಬಂದಾಗ ಅತ್ತುಬಿಟ್ಟರೇ ನನಗೆ ಅಷ್ಟು ಹಿಂಸೆ ಆಗುತ್ತಿರಲಿಲ್ಲ. ಆದರೆ ಅಳುವುದಕ್ಕೆ ನನಗೆ ಭಯ. ಹೊರಗಿನವರಿಗೆ ನಾನೊಬ್ಬ ಬಹಳ ಸುಖಿ, ಚೂಟಿ ಎಲ್ಲದರಲ್ಲೂ ಮುಂದು ಆದರೆ ನನಗೆ ಈ ಒಂದು ಹಿಂಸೆ ನನ್ನ ನೆಮ್ಮದಿಯನ್ನು ಕಸಿದಿತ್ತು.
ಎರಡು ವರ್ಷದ ಹಿಂದೆ ನಾನು ನನ್ನ ಊರಿಂದ ಪದವಿ ಶಿಕ್ಷಣಕ್ಕಾಗಿ ಬೆಂಗಳೂರಿಗೆ ಬಂದಿದ್ದೆ, ಆಗ ಗಣೇಶ ಹಬ್ಬದ ಸಮಯ ನಾನು ನನ್ನ ಸಹಪಾಠಿಗಳೊಡನೇ ಸೇರಿ ಗಣಪತಿಯನ್ನು ಕೂಡಿಸಿ ವಿಜೃಂಬಣೆಯಿಂದ ಹಬ್ಬ ಆಚರಿಸಿದ್ದೆ. ಸಂಜೆ ಗಣೇಶನನ್ನು ವಿಸರ್ಜಿಸುವ ಸಮಯ, ಎಲ್ಲರು ತಯಾರಾಗುತ್ತಿದ್ದರು, ಆಗ ನನಗೆ ಒಂದು ಕರೆಬಂತು. ಫೋನಲ್ಲಿ ಮಾತಾಡುತಿದ್ದಂತೆ ಕಣ್ಣಲ್ಲಿ ನೀರು ತುಂಬಿಕೊಂಡಿತು ಆದರೆ ಕಣ್ಣೀರು ಕಣ್ಣಿಂದ ಹರಿಯುವ ಧೈರ್ಯ ಮಾಡಲಿಲ್ಲ. ಸುತ್ತ ನನ್ನಸ್ನೇಹಿತರಿದ್ದಾರೆ ನನಗೆ ತಡಿಯಲಾಗದಷ್ಟು ಅಳು ಬರುತ್ತಿದೆ, ಆದರೆ ನನಗೆ ಎಲ್ಲರ ಮುಂದೆ ಅಳೋದಕ್ಕೆ ಆಗುತ್ತಿಲ್ಲ. ಹುಡುಕಿದೆ, ಹುಡುಕಿದೆ ಒಂದು ಕತ್ತಲೆ ಕೋಣೆಗಾಗಿ ಅಲೆದು ಅಲೆದು ಸಾಕಾಯ್ತೆ ಹೊರೆತು ಒಂದು ಕೋಣೆ ಸಿಗಲಿಲ್ಲ. ಕಡೆಗೆ ನಾನು ಗಣೇಶನ ವಿಸರ್ಜನಕ್ಕೆ ಹಾಡಿ ಕುಣಿದಾಡಲು ತಂದಿಟ್ಟಿದ್ದ ಸೌಂಡ್ ಬಾಕ್ಸ್ ನಲ್ಲಿ ವಾಲ್ಯೂಮ್ ಜಾಸ್ತಿ ಮಾಡಿದೆ, ಎಲ್ಲಾ ಸ್ನೇಹಿತರನ್ನು ಒಗ್ಗೂಡಿಸಿ ನನ್ನ ಬಾಯಿಗೆ ಒಂದು ಕರ್ಚಿಫ್ ತುರಕಿಕೊಂಡು ಕುಣಿದೆ, ಕುಣಿದೆ, ಕಣ್ಣೇರನ್ನು ಎಲ್ಲರು ಬೆವರ ಹನಿಯೆಂದು ಭಾವಿಸುವ ಹಾಗೆ ಕುಣಿದೆ, ಕಡೆಗೆ ಉಸಿರಾಡಲು ಕಷ್ಟವಾಗುವ ವರೆಗು ಕುಣಿದೆ. ನಂತರ ಒಂದಿಷ್ಟು ತಡಮಾಡದೇ ಊರಿಗೆ ಹೊರಡುವ ಬಸ್ಸು ಹತ್ತಿದೆ. ನಾನು ಊರಿಗೆ ಹೊರಡುವಷ್ಟರಲ್ಲಿ ಕತ್ತಲಾಗಿತ್ತು, ಬಸ್ಸಿನಲ್ಲಿ ಅಷ್ಟೊಂದು ಜನರಿರಲಿಲ್ಲ. ಆ ಕತ್ತಲಲ್ಲಿ ನನ್ನ ಕಣ್ಣಹನಿಗಳು ಕಣ್ಣಿಂದ ಹೊರ ಜಾರುವ ಧೈರ್ಯ ಮಾಡಿದವು. ಮಧ್ಯರಾತ್ರಿ ವೇಳೆಗೆ ಊರು ತಲುಪಿದೆ, ಮನೆಯ ಹತ್ತಿರ ನೆಂಟರು, ಇಷ್ಟರು ನೆರೆ ಹೊರೆಯವರು ಎಲ್ಲರು ತುಂಬಿಕೊಂಡಿದ್ದಾರೆ. ಅಲ್ಲಿ ನನ್ನ ತಾಯಿಯ ಸಾವಾಗಿದೆ. ನನ್ನನ್ನು ಈ ಭೂಮಿಗೆ ಪರಿಚಯಿಸಿದ ನನ್ನವ್ವ ಇನ್ನಿಲ್ಲ. ನನ್ನಪ್ಪ ನನ್ನನ್ನು ಬೈದಾಗಲೆಲ್ಲಾ ನನ್ನ ಪರವಹಿಸಿ ನನ್ನ ಸಮಾಧಾನ ಪಡಿಸುತ್ತಿದ್ದ ನನ್ನವ್ವ ಇನ್ನಿಲ್ಲ. ನಾನು ಊರಿಂದ ಬರುವ ದಾರಿಯನ್ನೆ ಕಾದು ನನ್ನ ಖುಷಿಯಲ್ಲಿ ತನ್ನ ಖುಷಿಕಾಣುತ್ತಿದ್ದ ನನ್ನವ್ವ ಇವತ್ತು ಶಾಶ್ವತ ನಿದ್ರೆಗೆ ಜಾರಿದ್ದಾಳೆ. ನಾನು ಅಳಬೇಕು, ಜೋರಾಗಿ ಅಳಬೇಕು, ನನ್ನವ್ವನನ್ನು ತಬ್ಬಿ ಅಳಬೇಕು ಆದರೆ ಈ ಜನರು ಅವರ ಮಧ್ಯೆ ನಾನೇಗೆ ಅಳಲಿ, ಯೋಚನೆಯಲ್ಲೇ ಮುಳುಗಿದ್ದ ನನಗೆ ಮನೆಗೆ ಬಂದದ್ದು ತಿಳಿಯಲೇ ಇಲ್ಲ. ಮನೆಗೆ ಬಂದಾಕ್ಷಣ ಅಕ್ಕ ನನ್ನನ್ನು ತಬ್ಬಿ ಜೋರಾಗಿ ಅಳಲು ಶುರುಮಾಡಿದಳು, ನನ್ನ ಕಣ್ಣಲ್ಲು ನೀರು ಬಂತು ಆದರೆ ಅಷ್ಟರಲ್ಲಿ ನನ್ನ ಯಾವನೋ ಸಂಬಂಧಿಕನೊಬ್ಬ ‘ನೀನೆ ಧೈರ್ಯ ಗೆಟ್ಟರೇ ಹೇಗೆ? ಅಪ್ಪನಿಗೆ ಅಕ್ಕನಿಗೆ ಇನ್ನುಮುಂದೆ ನೀನೆ ಎಲ್ಲಾ, ಎದ್ದು ಮುಂದೆ ಏನಾಗಬೇಕೊ ಅದರ ಕಡೆ ಗಮನ ಕೊಡು’ ಎಂದು ಬಿಟ್ಟ. ನನಗೆ ರಕ್ತ ಕುದಿಯಲಾರಂಭಿಸಿತು, ಕತ್ತಲೆ ಕೋಣೆಗೆ ಹೋಗುವ ಪರಿಸ್ಥಿತಿಯಲ್ಲಿ ನಾನಿರಲಿಲ್ಲ. ಹೀಗೆ ಆ ರಾತ್ರಿ ರೋಷ, ದುಃಖ ಮಿಶ್ರಿತ ಭಾವದಲ್ಲಿ ಕಳೆದೆ. ಬೆಳಗ್ಗೆ ಅಮ್ಮನ ಶವ ಸಂಸ್ಕಾರದ ಕಡೇಗಳಿಗೆವರೆಗು ತಡೆದೆ, ತಡೆದೆ ನನ್ನ ಶಕ್ತಿ ಮೀರಿ ತಡೆದೆ. ಇನ್ನೇನು ಅಮ್ಮನ ದೇಹಕ್ಕೆ ಅಗ್ನಿಸ್ಪರ್ಷ ಮಾಡಬೇಕು ಆಗ ನನ್ನಿಂದ ಆಗಲಿಲ್ಲ, ಯಾರು ಏನೆ ಹೇಳಲಿ, ನನ್ನನ್ನು ಕೈಲಾಗದವ ಅಂದುಕೊಳ್ಳಲಿ, ನನ್ನ ಹೇಡಿ ಅಂದುಕೊಳ್ಳಲಿ ನನಗದರ ಚಿಂತೆ ಆಗಲಿಲ್ಲ, ನನ್ನ ಹೆತ್ತು ಸಾಕಿದ ನನ್ನವ್ವನ ದೇಹ ಮಾತ್ರ ಕಾಣಿಸುತ್ತಿದೆ. ಅತ್ತೆ, ಜೋರಾಗಿ ಕಿರುಚಿ, ಗೋಡೆಗೆ ಗುದ್ದಿ ಗುದ್ದಿ ಅತ್ತೆ, ಸಮಾಧಾನ ಪಡಿಸಲು ಬಂದವರನ್ನ ತಳ್ಳಿ ಅತ್ತೆ, ನನ್ನನ್ನು ಅಳಬೇಡ ಎಂದು ಹೇಳಲು ಬಂದವರನ್ನ ನೂಕಿ ಅತ್ತೆ, ವರ್ಷಾನುಗಟ್ಟಲೆಯಿಂದ ಅಳುವ ಸ್ವಾತಂತ್ರವನ್ನು ಕಳೆದುಕೊಂಡಿದ್ದವನಿಗೆ ಸ್ವಾತಂತ್ರ ಸಿಕ್ಕಿತೆಂದು ಅತ್ತೆ, ನನ್ನ ಭಾವನೆ ನನ್ನ ಇಷ್ಟ ಎಂದು ಅತ್ತೆ, ಅತ್ತು ಅತ್ತು ಸುಸ್ತಾಗಿ ಬಿದ್ದೆ. ಕಡೆಗು ನನ್ನವ್ವ ತನ್ನ ಸಾವಿನಲ್ಲಿ ಭಾವನೆಯನ್ನು ಅಂಜಿಕೆಇಲ್ಲದೇ ವ್ಯಕ್ತಪಡಿಸಲು ಹೇಳಿಕೊಟ್ಟಳು. ನನ್ನ ಜೀವನದ ಅತ್ಯಂತ ದೊಡ್ಡ ಹಿಂಸೆಯಾಗಿ ಕಾಡುತ್ತಿದ್ದ ನನ್ನ ಅಳುವನ್ನು ನನಗೆ ಮರಳಿಸಿದ್ದಳು ಅವ್ವ. ಇನ್ನೆಂದು ನಾನು ಸಾರ್ವಜನಿಕವಾಗಿ ಅಳೋದಕ್ಕೆ ಹೆದರಿಕೆಯಾಗಲಿಲ್ಲ.
ಈ ನನ್ನ ದುರಂತದ ಘಟನೆ ನನಗೆ ಮುಕ್ತವಾಗಿ ಭಾವನೆಯನ್ನು ವ್ಯಕ್ತಪಡಿಸಲು ಕಲಿಸಿತು, ಭಾವನೆಗೆ ಲಿಂಗ ಭೇದವಿಲ್ಲ ಎಂಬುದನ್ನು ಕಲಿಸಿತು, ನಾನು ಏನೆಂಬುದರ ಅರಿವು ನನಗಿದ್ದಲ್ಲೀ ಬರೀ ನನ್ನ ಅಳುವ ಭಾವನೆಯಿಂದ ನನ್ನನ್ನು ಹೇಡಿ, ಕೈಲಾಗದವನೆಂದು ನನ್ನನ್ನು ಜಡ್ಜ್ ಮಾಡುವವರ ಬಗ್ಗೆ ನಾನು ಗಮನ ಹರಿಸುವ ಅವಶ್ಯಕತೆಯಿಲ್ಲ ಎಂಬುದನ್ನು ಕಲೆತೆ. ಎಷ್ಟೇ ಆಗಲಿ ಈ ಜೀವನ ನನ್ನದು, ಭಾವನೆಗಳನ್ನು ಅದುಮಿ ಹಿಂಸೆ ಅನುಭವಿಸುತ್ತಿದ್ದುದು ನಾನೆ ಹೊರೆತು ನನ್ನನ್ನು ಠೀಕಿಸುತ್ತಿದ್ದ ಜನರಲ್ಲ ಅಲ್ಲವೇ..?
ಭಾವನೆಗಳನ್ನು ವ್ಯಕ್ತಪಡಿಸಲು ಅಂಜದಿರಿ. 


Friday, January 4, 2019



 ಏನು ಯೋಚಿಸ್ತಿದ್ದೀರಾ...?
ಏನು ಯೋಚನೆ ಮಾಡ್ತಿದ್ದೀವಿ? ಇದನ್ನ ತಿಳ್ಕೊಳ್ಳೋದು ತುಂಬಾ ಮುಖ್ಯ. ಯಾಕೆ ಅಂತ ತಿಳ್ಕೊಬೇಕಾದರೇ ಈ ಲೇಕನಿ ಓದಿ

ನಾನು ಒಂಬತ್ತನೆ ತರಗತಿಯಲ್ಲಿದ್ದಾಗ ವಿಜ್ಞಾನ ಪರೀಕ್ಷೆಗೆ ತಯಾರಾಗುತ್ತಿದ್ದಾಗ ನನಗೊಂದು ಆಲೋಚನೆ ಬಂತು, ಆ ಆಲೋಚನೆ ಏನೆಂದರೇ, ಅದಾಗಲೇ ಕತ್ತಾಲಾಗಿದೆ ಬೆಳಗ್ಗೆ ಪರೀಕ್ಷೆ ಇದೆ, ಈ ಅಲ್ಪ ಸಮಯದಲ್ಲಿ ನಾನು ಎಲ್ಲ ಓದಿ ಮುಗಿಸಲು ಸಾಧ್ಯವಿದೆಯೇ? ಎಂದು.

ಈ ಯೋಚನೆ ಬಂದಿದ್ದೇ ಬಂದಿದ್ದು, ನನಗೆ ಎದೆ ಹೊಡೆದುಕೊಳ್ಳಲು ಶುರುವಾಯಿತು, ಮುಖ ಬೆವರಲು ಹತ್ತಿತು, ಪುಸ್ತಕ ಕೈಯಿಂದ ಬೀಳುವಷ್ಟರ ಮಟ್ಟಿಗೆ ಕೈ ನಡುಗಲಾರಂಭಿಸಿತು, ಬಾಯಿ ಪದಗಳನ್ನು ಓದುತ್ತಿದೆ ಆದರೆ ತಲೆಗೆ ಏನು ಅರ್ಥವಾಗುತ್ತಿರಲಿಲ್ಲ. ಕಡೆಗೇ ಕಣ್ಣಿಂದ ಹನಿಗಳು ಜಾರಿ ಅಮ್ಮನ ಬಳಿ ಹೋಗಿ, ಅಮ್ಮ ನನಗೇನೋ ಆಗೋಗಿದೆ, ನಾಳೆ ಪರೀಕ್ಷೆ ಬರಿಯಲು ಸಾಧ್ಯವಿಲ್ಲ ಎಂದು ಬಿಟ್ಟೆ.

ಹಾಗೋ ಹೀಗೋ ಅಮ್ಮ ಒತ್ತಾಯ ಮಾಡಿ ನನ್ನನ್ನು ಪರೀಕ್ಷೆಗೆ ಕಳುಹಿಸಿದರು, ನಂತರ ನನಗೆ ಒಳ್ಳೆ ಅಂಕಗಳು ಬಂದವು. ಆದರೆ ಇದಾದ ಮೇಲೆ ಮತ್ತೊಂದು ಆಲೋಚನೆ ಬಂದಿತು ಅದೇನೆಂದರೆ, ಒಂದುವೇಳೆ ಮುಂದಿನ ಪರೀಕ್ಷೆಯಲ್ಲು ನನಗೇ ಹೀಗೆ ಭಯ ಆದರೆ ಏನು ಮಾಡುವುದು ಎಂದು. ಅಷ್ಟೇ ನನಗೆ ವಿಜ್ಞಾನವೆಂದರೇ ಒಂದು ತೆರನಾದ ಹಿಂಸೆ ಬಂದು ಬಿಟ್ಟಿತು. ಓದಲು ಕುಳಿತರೇ ಸಾಕು ಎದೆ ಹೊಡೆದುಕೊಳ್ಳುತಿತ್ತು.

ನಾನು ಪ್ರತಿ ಭಾರಿಯು ಯಾಕಾದರು ಶಾಲೆಗಳನ್ನಿಟ್ಟಿದ್ದಾರೋ, ಯಾಕಾದರು ಈ ಪರೀಕ್ಷೆಗಳು ಬರುತ್ತವೋ ಇವೆಲ್ಲಾ ಇರದಿದ್ದರೇ ನಾನು ಈ ಭಯ, ಹಿಂಸೆ ಇವುಗಳನೆಲ್ಲಾ ಅನುಭವಿಸುತ್ತಲೇ ಇರಲಿಲ್ಲ ಎಂದು ಸಾವಿರ ಭಾರಿ ಅಂದುಕೊಂಡಿದ್ದೇನೆ. ಎಲ್ಲರೂ ಹೇಳಿದಂತೆ ನಾನು ಅವತ್ತಿನದನ್ನು ಅವತ್ತೇ ಅಭ್ಯಾಸಿಸುತಿದ್ದೆ. ಪರೀಕ್ಷೆಗೆ ಒಂದು ತಿಂಗಳು ಮುಂಚೆಯೇ ಎಲ್ಲಾ ಓದಿ ಮುಗಿಸಿರುತ್ತದೆ, ಆದರು ಈ ತಳಮಳ ಕಡಿಮೆಯೇ ಆಗುತ್ತಿರಲಿಲ್ಲ.

ಹಾಗಾದರೇ ನನ್ನ ಒದ್ದಾಟಕ್ಕೆಲ್ಲಾ ಏನು ಕಾರಣ? ವಿಜ್ಞಾನ ವಿಷಯನಾ? ಶಾಲೆ ಪರೀಕ್ಷೆಗಳ? ಸೂಕ್ಷ್ಮವಾಗಿ ಗಮನಿಸಿದರೇ ಮೊದಲು ನನಗೆ ಆತಂಕ ಶುರುವಾಗಿದ್ದೂ, ‘ಬೆಳಗ್ಗೆ ಆಗುವುದರೊಳಗೆ ಎಲ್ಲವನ್ನು ಓದಿ ಮುಗಿಸಲು ಸಾಧ್ಯವೇ?’  ಎಂಬ ಒಂದೇ ಒಂದು ಆಲೋಚನೆಯಿಂದ, ಇದರಿಂದ ‘ಭಯ’ ಎಂಬ ಭಾವನೆ ಮೂಡಿತು, ಆ ಭಯದ ಕಾರಣ ನಾನು ಪರೀಕ್ಷೆಗೆ ಹೋಗಲ್ಲ ಎಂದು ಅಳಲಾರಂಭಿಸಿದೆ. ಹಾಗೆ ಮುಂದೇ ‘ಈ ಪರೀಕ್ಷೆಯಲ್ಲಿ ಆದಂತೆ ಮತ್ತೆಲ್ಲಾ ಪರೀಕ್ಷೆಯಲ್ಲಿ ಆದರೇ ಏನು ಗತಿ’ ಎಂಬ ಒಂದು ಆಲೋಚನೆ ನನ್ನಲ್ಲಿ ಪರೀಕ್ಷೆ ಬಗೆಗೆ ವಿಪರೀತ ಆತಂಕ ಮೂಡಿಸಿತು.

ಈ ಘಟನೆಯನ್ನು ನಾನು ಪ್ರಸ್ತಾಪಿಸುವುದಕ್ಕೆ ಒಂದು ಕಾರಣವಿದೆ. ನಾವು ಪ್ರತಿಭಾರಿಯು ನಮ್ಮ ನಡವಳಿಕೆಗಳಿಗೆ, ನಮ್ಮ ಕಷ್ಟ ಸುಖಗಳಿಗೆ ಬೇರೆಯವರಿಗೆ, ಹೊರ ಜಗತ್ತಿನ ಕಡೆಗೆ ಬೆಟ್ಟುಮಾಡೋದು ಸರ್ವೇಸಾಮಾನ್ಯ. ಆದರೆ ಸ್ವಲ್ಪ ಸೂಕ್ಷ್ಮವಾಗಿ ಗಮನಿಸಿದರೇ ನಮ್ಮ ಪ್ರತಿಯೊಂದು ಕಾರ್ಯಗಳ ಹಿಂದೆ ಒಂದಲ್ಲಾ ಒಂದು ಭಾವನೆಯ ಪ್ರೇರೆಪಣೆ ಇರುತ್ತದೆ. ಆ ಭಾವನೆ ಉಗಮದ ಹಿಂದೆ ಒಂದು ಆಲೋಚನೆ ಇರುತ್ತದೆ.
(thoughts) →→      (emotions) →→    (Actions)

ನಮ್ಮ ನಿಯಂತ್ರಣದಲ್ಲಿರದ ಈ ಆಲೋಚನೆಗಳಿಗೆ ನಾವು ಸ್ಪಂದಿಸುವ ರೀತಿಯಲ್ಲೇ ನಮ್ಮ ಖುಷಿ ನೆಮ್ಮದಿ ಅಡಗಿದೆ. ನನಗೆ ಬಾಧಿಸುತ್ತಿದ್ದ ಆಲೋಚನೆ ಬಗ್ಗೆ ಅರಿವಿಲ್ಲದ ನಾನು ಸಮಸ್ಯೆ ಇರುವುದು ಪರೀಕ್ಷೆಯಲ್ಲಿ, ವಿಜ್ಞಾನದಲ್ಲಿ ಎಂದು ಅವನ್ನು ಶಪಿಸಲಾರಂಭಿಸಿದೆ. ಮೇಲಿನ ಉದಾಹರಣೆಯಲ್ಲಿ ನನ್ನ ಆಲೋಚನೆಗೆ ಯಾವ ಹುರುಳಿರಲಿಲ್ಲ, ಆ ಆಲೋಚನೆಯನ್ನು ನಂಬಿ, ಆತ್ಮವಿಶ್ವಾಸ ಕಳೆದುಕೊಂಡೆ. ಹೀಗೆ ನನಗೆ ಓದುವುದೇ ಹಿಂಸೆ ಆಯಿತು. ಮುಂದೇ ಇದರ ಅರಿವಾದಾಗ ನನಗೆ ನಗು ಬಂದಿತು, ಇಷ್ಟೆನಾ ನನ್ನನ್ನು ಬಾಧಿಸುತ್ತಿರುವುದು ಎಂದು ತಿಳಿದ ನಂತರ ಇದು ಆಲೋಚನೆಯಷ್ಟೆ ಇದನ್ನು ನಂಬೋದು ಬೇಡ ನನ್ನನ್ನು ನಾನು ನಂಬುತ್ತೇನೆ ಎಂದು ಯೋಚಿಸ ತೊಡಗಿದೆ. ನಂತರ ಕ್ರಮೇಣ ನನ್ನ ಭಯ ಕಡಿಮೆಯಾಗಿ ನನಗೀಗ ಯಾವ ಪರೀಕ್ಷೆ ಭಯವು ಇಲ್ಲ.

ನಾವು ಭಾವಜೀವಿಗಳು, ಆದರೆ ಎಲ್ಲೋ ಒಂದು ಕಡೆ ಭಾವನೆಗಳು ಅತ್ಯಂತ ನಿರ್ಲಕ್ಷಕ್ಕೊಳಗಾಗಿರೋದು ದುರಂತ. ಆದರೆ ಸತ್ಯ ಏನೆಂದರೇ ಭಾವನೆಗಳಿಲ್ಲದೇ ನಾವೇನು ಮಾಡಲು ಸಾಧ್ಯವಿಲ್ಲ. ಈಗ ಈ ಲೇಖನಿ ಬರೆಯುವುದಕ್ಕೆ ನನಗೇ ನನ್ನ ವಿಷಯದ ಮೇಲೆ ನಂಬಿಕೆ ಇರಬೇಕು, ಆ ನಂಬಿಕೆ ಕೂಡ ಒಂದು ಭಾವನೆ. ಈ ಆಲೋಚನೆಗಳಾಗಲೀ, ಅದರಿಂದ ಉಗಮಿಸುವ ಭಾವನೆಗಳಾಗಲೀ ನಮ್ಮ ನಿಯಂತ್ರಣದಲ್ಲಿರುವುದಿಲ್ಲ. ಆದರೆ ನಮ್ಮಲ್ಲಿ ಮೂಡುತ್ತಿರುವ ಆಲೋಚನೆಗಳ ಬಗೆಗೆ ನವiಗೆ ಪ್ರಜ್ಞಾಪೂರ್ವಕ ಅರಿವಿದ್ದರೇ, ಅದರಿಂದ ಮೂಡುತ್ತಿರುವ ಭಾವನೆಗಳ ಬಗ್ಗೆ ಗಮನವಿದ್ದರೇ, ಆ ಆಲೋಚನೆಗಳಿಗೆ ಯಾವ ರೀತಿ ಸ್ಪಂದಿಸಬಹುದು ಎಂದು ನಾವೆ ನಿರ್ಧರಿಸಬಹುದು. ನಾನು ಮೇಲೆ ನನ್ನ ಸಮಸ್ಯೆ ಬಗೆಹರಿಸಿಕೊಂಡಂತೆ ಎಲ್ಲರೂ ತಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದು. ಅದಕ್ಕೆ ನಾವು ನಮಗೆ ಸಮಯ ಕೊಡಬೇಕು ಅಷ್ಟೇ.

ನಮ್ಮಲ್ಲಿ ಎಷ್ಟು ಭಾವನೆಗಳಿವೆ ಎಂಬುದರ ಬಗ್ಗೆ ನಿವiಗೆ ತಿಳಿದಿದೆಯೇ? ಕೆಳಗಿನ ಈ ಚಿತ್ರ ನೋಡಿ. ನಿಮ್ಮಲ್ಲಿ  ಈಗ ಯಾವ ಭಾವನೆ ಇದೆ ಗುರುತಿಸಿ.




ಈ ನನ್ನ ಆಲೋಚನೆ ಬ್ಲಾಗ್‍ನಲ್ಲಿ ಇನ್ನುಮುಂದೆ, ಜನ ಹೆಚ್ಚು ಪ್ರಯಾಣಿಸದ ಈ ದಾರಿಯ ಬಗ್ಗೆ ಹೆಚ್ಚು ಬರೆಯುತ್ತೇನೆ. ಈ ಭಾವನೆಗಳ ಮ್ಯಾಜಿಕ್ ಬಗ್ಗೆ ಮುಂದಿನ ವಾರಗಳಲ್ಲಿ ಮತ್ತಷ್ಟು ಹಂಚಿಕೊಳ್ಳುತ್ತೇನೆ.

ಅಂದ್ಹಾಗೆ ನಿಮಗೀಗ ಯಾವ ಆಲೋಚನೆಕಾಡುತ್ತಿದೆ? ಏನು ಯೋಚನೆ ಮಾಡುತ್ತಿದ್ದೀರಾ?